ಶಿವಮೊಗ್ಗ ನ್ಯೂಸ್…

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ರಾಜಕಾರಣದ ಕೈಪಿಡಿ ಎಂದು ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಹೇಳಿದರು.ಅವರು ಇಂದು ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ರಾಮಾಯಣ ವಾಲ್ಮೀಕಿ ಬರೆದ ಅತ್ಯಂತ ಶ್ರೇಷ್ಠ ಕೃತಿಯಾಗಿದೆ. ಜನಜೀವನವನ್ನು ಪವಿತ್ರಗೊಳಿಸಿದೆ. ಕುಟುಂಬಗಳಿಗೆ ಗೌರವ ನೀಡಿದೆ. ಸಂಸ್ಕೃತಿಯ ಪ್ರತೀಕವಾಗಿದೆ. ವಿಶೇಷವಾಗಿ ರಾಜಕೀಯ ತಿಳಿವಳಿಕೆ ನೀಡಿದೆ. ರಾಜಕಾರಣದ ಅತ್ಯಂತ ಸೂಕ್ಷ್ಮ ವಿಷಯಗಳು ಇಡೀ ರಾಮಾಯಣದ ತುಂಬಾ ಅಡಗಿವೆ. ರಾಜಧರ್ಮವನ್ನು ಅದು ಹೇಳುತ್ತದೆ. ರಾಮಾಯಣ ಕೃತಿ ರಾಜಕಾರಣದ ಗೃಹಸ್ಥಾಶ್ರಮವೂ ಆಗಿದೆ. ಹಾಗಾಗಿಯೇ ಇದು ರಾಜಕಾರಣದ ಕೈಪಿಡಿ ಎಂದರು.ಶ್ರೀರಾಮ ಆದರ್ಶ ಎಂಬ ಭಾವನೆಯನ್ನು ಬೆಳೆಸುತ್ತದೆ. ಇಡೀ ರಾಮಾಯಣದ ಕತೆ ಒಂದು ಸಾಮಾನ್ಯ ಜೀವನದ ನೆಲೆಯನ್ನು ಒದಗಿಸುವುದರ ಜೊತೆಗೆ ದ್ವೇಷವನ್ನು ಅಳಿಸುವ ಮತ್ತು ಕರ್ತವ್ಯದ ಸಂಘರ್ಷವನ್ನು ತಿಳಿಸುವ ಜೊತೆಗೆ ಸಾಹಿತ್ಯವನ್ನು ಗುರುತಿಸುವ ಕೆಲಸವನ್ನು ರಾಮಾಯಣ ಕೃತಿ ಮಾಡುತ್ತದೆ. ಸಾಹಿತ್ಯದ ಮೊದಲ ಸೃಷ್ಠಿಯೇ ರಾಮಾಯಣ ಕೃತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಮಾಯಣ ಸಂಸ್ಕೃತಿಯ ಪ್ರತೀಕವಾಗಿದೆ. ಶ್ರೀರಾಮ ಒಬ್ಬ ಆದರ್ಶ ಪುರುಷ ಎನ್ನುವುದಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಆದರೆ, ಇಂದಿನ ಕೆಲವು ರಾಜಕಾರಣಿಗಳು ಶ್ರೀರಾಮನನ್ನು ಕೇವಲ ರಾಜಕಾರಣಕ್ಕಾಗಿ ಎಳೆದು ತರುತ್ತಿರುವುದು ಅತ್ಯಂತ ದುರಂತವಾಗಿದೆ. ಜಗತ್ತೇ ಶ್ರೀರಾಮ ಹುಟ್ಟಿದ ಜಾಗ ಅಯೋಧ್ಯೆ ಎಂದು ಒಪ್ಪಿಕೊಂಡರೆ ಕೆಲವು ಮಾತ್ರ ಇದಕ್ಕೆ ಆಧಾರ ಎಲ್ಲಿ ಎಂದು ಕೇಳುತ್ತಾರೆ ಎಂದರು.ವಾಲ್ಮೀಕಿ ಎಂದರೆ ಚರ್ಚೆಯ ವಸ್ತುವೇ ಅಲ್ಲ, ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆತ ಸೀಮಿತವಾಗಿಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ನಮ್ಮ ವಿದೇಶಿ ಸಂಸ್ಕೃತಿಯನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಬೆಳಗ್ಗೆ ಮದುವೆ, ಮಧ್ಯಾಹ್ನ ಡೈವೋರ್ಸ್, ಸಂಜೆ ಮರು ಮದುವೆ. ಆದರೆ, ಭಾರತದಲ್ಲಿ ಹಾಗಲ್ಲ. ಇಂತಹ ಸಂಸ್ಕೃತಿಯನ್ನು ರಾಮಾಯಣದ ಕೃತಿಯ ಮೂಲಕ ಜಾಗೃತಿ ಮೂಡಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಹಾಗಾಗಿ ರಾಮಾಯಣ ಅದೊಂದು ಪುಸ್ತಕವಲ್ಲ, ಜೀವನ ಧರ್ಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಬಿ.ಎಸ್. ನಾಗರಾಜ್, ಪಾಲಿಕೆ ಸದಸ್ಯ ಡಿ. ನಾಗರಾಜ್, ವಿಶ್ವಾಸ್, ವಾಲ್ಮೀಕಿ ಸಮಾಜದ ಪ್ರಮುಖರಾದ ಶಿವಪ್ಪ, ರೂಪಾ ಲಕ್ಷ್ಮಣ್, ಸೀತಾರಾಮ್, ಶಿವಾಜಿ, ಲಕ್ಷ್ಮಣಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮಿಪ್ರಸಾದ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಜಿಪಂ ಸಿಇಒ ಎಂಎಲ್ ವೈಶಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಮೊದಲಾದವರಿದ್ದರು.ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಇ. ಅಜ್ಜಪ್ಪ ಸ್ವಾಗತಿಸಿದರು. ಕುಂಸಿ ನಾಗರತ್ನಮ್ಮ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…