ಶಿವಮೊಗ್ಗ ನ್ಯೂಸ್…

ಕೆನರಾ ಬ್ಯಾಂಕ್ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಬ್ಯಾಂಕಿನ ಜನರಲ್ ಮ್ಯಾನೇಜರ್ ಕೆ. ರಾಮಾನಾಯ್ಕ್ ಹೇಳಿದ್ದಾರೆ.ಅವರು ಇಂದು ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ 10 ಲಕ್ಷ ರೂ. ಮೌಲ್ಯದ ವೆಂಟಿಲೇಟರ್ ಅನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.ಬ್ಯಾಂಕಿನ ಸಾಂಸ್ಥಿಕ, ಸಾಮಾಜಿಕ ಬಾಧ್ಯತಾ ಕಾರ್ಯಕ್ರಮದ ಅಡಿಯಲ್ಲಿ ಕೆನರಾ ಬ್ಯಾಂಕ್ ಕೊರೋನಾ ಸಂದರ್ಭದಲ್ಲಿ ಅನೇಕ ಕಡೆ ಅಗತ್ಯತೆಯ ಆಧಾರದ ಮೇಲೆ ಸಹಕಾರ ನೀಡುತ್ತಾ ಬಂದಿದೆ. ಆಂಬುಲೆನ್ಸ್, ವೆಂಟಿಲೇಟರ್, ವೀಲ್ ಚೇರ್, ತುರ್ತು ಮೆಡಿಸನ್ ಗಳನ್ನು ಕಳೆದ ಒಂದು ಮುಕ್ಕಾಲು ವರ್ಷದ ಕೊರೋನಾ ಅವಧಿಯಲ್ಲಿ ವಿತರಿಸಿದೆ ಎಂದರು.

ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ 79 ಬ್ರಾಂಚ್ ಹೊಂದಿದ್ದು, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದೆ. ವಿಶೇಷ ಸ್ಕೀಂಗಳನ್ನು ಪ್ರಕಟಿಸಿದೆ. ಹೊಸ ಹೊಸ ರೀತಿಯ ಸಾಲವನ್ನು ನೀಡಿದೆ. ಅತ್ಯಂತ ಕಡಿಮೆ ದರದಲ್ಲಿ ಬಂಗಾರ ಮತ್ತು ಮನೆ ಕಟ್ಟಲು ಸಾಲವನ್ನು ನೀಡಿದ್ದು, ಕೆನರಾ ಚಿಕಿತ್ಸಾ ಮತ್ತು ಕೆನರಾ ಸುರಕ್ಷಾ ಸ್ಕೀಂ ಅಡಿಯಲ್ಲಿ ಸಹಾಯ ಹಸ್ತ ಚಾಚಿದೆ ಎಂದರು.ಬ್ಯಾಂಕ್ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಜನತೆ ಬ್ಯಾಂಕ್ ಅನ್ನು ಸಂಪರ್ಕಿಸಿ ನೆರವು ಪಡೆಯಬಹುದಾಗಿದೆ ಎಂದು ತಿಳಿಸಿದರು.ಮೇಯರ್ ಸುನಿತಾ ಅಣ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿ ಕೊರೋನಾ ಉಲ್ಬಣಿಸಿದಾಗ ಆತಂಕ ಉಂಟಾಗಿತ್ತು. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೆನರಾ ಬ್ಯಾಂಕ್ ಸೇರಿದಂತೆ ಅನೇಕ ದಾನಿಗಳ ನೆರವಿನ ಮೂಲಕ ತುರ್ತು ಉಪಕರಣಗಳ ನೆರವನ್ನು ಕೂಡ ಕ್ರೋಢೀಕರಿಸಲಾಯಿತು.

ವಿಶೇಷವಾಗಿ ಮಕ್ಕಳ ಮೇಲೆ ಕೊರೋನಾ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿದಾಗ ಪೂರ್ವಭಾವಿಯಾಗಿ ಸಿದ್ಧತೆ ದೃಷ್ಠಿಯಿಂದ ಪಾಲಿಕೆ ಕೂಡ ಅನೇಕ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ನೆರವು ಯಾಚಿಸಿತ್ತು. ಈ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಕೆನರಾ ಬ್ಯಾಂಕ್ ಮಕ್ಕಳ ವಿಭಾಗಕ್ಕೆ ತುರ್ತು ಅಗತ್ಯವಿದ್ದ ವೆಂಟಿಲೇಟರ್ ನೀಡಿದೆ. ದಸರಾ ಸಂದರ್ಭದಲ್ಲೂ ಬ್ಯಾಂಕ್ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯಿಂದ ಜಾಗೃತಿ ಮೂಡಿಸುವ ಕೆಲಸವಾಗಲಿದ್ದು, ಈ ಅಭಿಯಾನದಲ್ಲಿ ಬ್ಯಾಂಕ್ ಕೈಜೋಡಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂದೀಪ್ ರಾವ್, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಡಾ. ಶ್ರೀಧರ್, ಡಾ. ಸಿದ್ಧನಗೌಡ ಪಾಟೀಲ್, ಡಾ. ಮಂಜುನಾಥ್, ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…