ಶಿವಮೊಗ್ಗ ನ್ಯೂಸ್…

ಸಹಕಾರಿ ತತ್ವ ಅತ್ಯಂತ ಅಮೂಲ್ಯವಾಗಿದೆ. ಉತ್ತಮ ವ್ಯಕ್ತಿಗಳಿಂದ ಸಹಕಾರಿ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳಾಗುತ್ತವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮನ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಹೇಳಿದ್ದಾರೆ.

ಅವರು ಇಂದು ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ವಿಪ್ರ ಸಹಕಾರಿ ನಿರ್ದೇಶಕರ ಹಾಗೂ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಅನೇಕ ಮಹನೀಯರ ತ್ಯಾಗದಿಂದ ಕರ್ನಾಟಕ ರಾಜ್ಯ ರಚನೆಯಾಗಿದೆ. ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಕರ್ನಾಟಕ ರಾಜ್ಯ ಒಗ್ಗೂಡಿಸಿದ ಶ್ರೇಯಸ್ಸು ಸಲ್ಲಿಸಬೇಕಾಗುತ್ತದೆ ಎಂದರಲ್ಲದೇ, ರಾಜ್ಯೋತ್ಸವದ ಶುಭಾಶಯ ಕೋರಿದರು.ವಿಪ್ರ ಸಹಕಾರಿಗಳ ಸಮಾವೇಶ ಬೇಕಿತ್ತಾ ಎನ್ನುವ ಪ್ರಶ್ನೆ ಕೆಲವರಲ್ಲಿ ಕಾಡುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿಗಳು ಕೂಡ ಹಲವು ಬಾರಿ ಜಾತಿಗಳಿಗೆ ನಿಗಮ ಮತ್ತು ಅಭಿವೃದ್ಧಿ ಮಂಡಳಿಗಳು ಬೇಕಾ ಎಂದು ಪ್ರಶ್ನಿಸಿದ್ದಾರೆ.

ಆದರೆ, ಸಂವಿಧಾನ ರಚನೆಯಾಗಿ ಹಲವು ವರ್ಷಗಳಾದರೂ ಸಂವಿಧಾನದ ಅಡಿಯಲ್ಲೇ ಜಾತಿ ಆಧಾರದ ಮೇಲೆ ಮೀಸಲಾತಿಯನ್ನು ಇಂದಿಗೂ ನೀಡಲಾಗುತ್ತಿದೆ. ಅಂದಮೇಲೆ, ಎಲ್ಲಾ ಜಾತಿಗಳಿಗೂ ಸಮಾವೇಶದ ಮತ್ತು ನಿಗಮಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಪ್ರಮುಖವಾಗಿದೆ. ಆದ್ದರಿಂದ ಜಾತಿ ಆಧಾರಿತ ಕಾರ್ಯಕ್ರಮಗಳು ಅನಿವಾರ್ಯವಾಗಿವೆ. ಸಹಕಾರಿ ಕ್ಷೇತ್ರದಲ್ಲಿ ವಿಪ್ರ ಸಹಕಾರಿಗಳಿಗೆ ವಿಫುಲವಾದ ಅವಕಾಶವಿದೆ. ದೇಶದಲ್ಲಿ ಅನೇಕ ಪ್ರಮುಖರ ಸಹಕಾರಿ ರಂಗದಲ್ಲಿ ಹೆಸರು ಗಳಿಸಿದ್ದಾರೆ.

ಅಮುಲ್, ಲಿಜ್ಜತ್ ಪಾಪಡ್ ಸೇರಿದಂತೆ ಅನೇಕ ಫರ್ಟಿಲೈಸರ್ಸ್ ಕೋ ಆಪರೇಟಿವ್ ಸಂಸ್ಥೆಗಳು ದೇಶದಲ್ಲಿ ಅತ್ಯುನ್ನತ ಸ್ಥಾನ ಪಡೆದಿವೆ ಎಂದರು. ಅನೇಕ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ರಾಜಕೀಯ ಪ್ರವೇಶವಾಗಿದೆ ಎಂಬ ಆರೋಪವಿದೆ. ನಿರ್ದೇಶಕರ ಹುದ್ದೆಗಳಿಗೆ ಪೈಪೋಟಿ ಇದೆ. ಸ್ವಯಂಕೃತ ಅಪರಾಧದಿಂದ ಮಾತ್ರ ಕೆಲವು ಸಹಕಾರಿ ಸಂಸ್ಥೆಗಳು ನಷ್ಟ ಅನುಭವಿಸಿವೆ. ಆದರೆ, ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರದಿಂದ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಅನೇಕ ಸಂಸ್ಥೆಗಳು ತೋರಿಸಿವೆ. ಸಾರ್ವಜನಿಕರ ನಂಬಿಕೆಯನ್ನು ಸಹಕಾರಿ ಸಂಸ್ಥೆಗಳು ಕಳೆದುಕೊಳ್ಳಬಾರದು ಎಂದರು.ದುರಂತವೆಂದರೆ ಸಹಕಾರಿ ಕ್ಷೇತ್ರದಲ್ಲಿಷ್ಟು ವ್ಯಾಜ್ಯಗಳು ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ. ರಾಜಕೀಯ ಪ್ರವೇಶ ಸಹಕಾರಿ ಕ್ಷೇತ್ರವನ್ನು ನಿಯಂತ್ರಣ ಮಾಡುವ ಉದ್ದೇಶ ಅಡಗಿದೆ ಎಂಬುದು ಸತ್ಯ. ಆದರೆ, ಕೆಲವೊಂದು ಬದಲಾವಣೆ ಸಹಕಾರಿ ಕ್ಷೇತ್ರದಲ್ಲೂ ಅಗತ್ಯವಿದೆ. ಸಾರ್ವಜನಿಕರಿಗೆ ಬಹುಉಪಯೋಗವಾಗುವ ಸಹಕಾರಿ ಕ್ಷೇತ್ರವನ್ನು ಬೆಳೆಸುವುದು, ಅಭಿವೃದ್ಧಿಪಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಹೊಯ್ಸಳ ಕರ್ನಾಟಕ ಸೌಹಾರ್ದ ಸಹಕಾರಿ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, ಜಿಲ್ಲಾ ಸಹಕಾರ ಸಂಸ್ಥೆಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿವೆ. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬ್ರಾಹ್ಮಣ ಸಮಾಜ ಮಹತ್ತರ ಕೊಡುಗೆ ನೀಡಿದೆ. ಜಿಲ್ಲೆಯಲ್ಲಿ 650 ಕ್ಕೂ ಹೆಚ್ಚು ವಿಪ್ರ ಸಹಕಾರಿಗಳಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಜಿಲ್ಲಾ ಸಹಕಾರಿ ಕ್ಷೇತ್ರಗಳಿಂದ ಸಹಾಯವಾಗಿದೆ. 8 ಸಹಕಾರಿ ಸಂಸ್ಥೆಗಳು ವಿಪ್ರರ ನೇತೃತ್ವದಲ್ಲಿ 350 ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುತ್ತಿವೆ. ಇದೊಂದು ಇತಿಹಾಸ. ಸಮಾಜಕ್ಕೆ ವಿಪ್ರ ಸಹಕಾರಿಗಳ ಕೊಡುಗೆ ಏನು? ಮತ್ತು ಅವರ ಐಡೆಂಟಿಟಿ ಸಮಾಜಕ್ಕೆ ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯ ಅತಿಥಿಗಳಾಗಿ ಸಹಕಾರಿ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿಗಮದ ನಿರ್ದೇಶಕರಾದ ಎ.ಆರ್. ಪ್ರಸನ್ನಕುಮಾರ್ ಸೇರಿದಂತೆ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ವಿಪ್ರಸಮಾಜದ ಪ್ರಮುಖರು ಉಪಸ್ಥಿತಿರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…