ಶಿವಮೊಗ್ಗ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2021 -22 ನೇ ಸಾಲಿಗೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿಯನ್ನು ಮೀರಿ ಇಲ್ಲಿಯವರೆಗೆ 13.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೇಡಿಕೆ ಪರಿಗಣಿಸಿ ಕೇಂದ್ರ ಸರ್ಕಾರ ನಿಗದಿತ ಗುರಿಯನ್ನು ಅವಧಿಗೆ ಮುನ್ನ ಪೂರ್ಣಗೊಳಿಸಿದ್ದಕ್ಕಾಗಿ ಹೆಚ್ಚುವರಿಯಾಗಿ 1.40 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಠಿಗೆ ಅವಕಾಶ ಕಲ್ಪಿಸಿದ್ದು, ರಾಜ್ಯಕ್ಕೆ ಹೆಚ್ಚುವರಿಯಾಗಿ 715 ಕೋಟಿ ರೂ. ಅನುದಾನ ನೀಡಿದೆ ಎಂದರು.24.12.2021 ರಂದು ನರೇಗಾ ಕೂಲಿ ಪಾವತಿಸಲು ಕೇಂದ್ರ ಸರ್ಕಾರ 661.24 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇಲ್ಲಿಯವರೆಗಿನ ಸಂಪೂರ್ಣ ಬಾಕಿ ಚುಕ್ತಾ ಆದಂತಾಗಿದೆ ಎಂದರು.ಕೊಳಗೇರಿ ನಿವಾಸಿಗಳ ಹಕ್ಕುಪತ್ರ ವಿತರಣೆ, ಅಪೂರ್ಣಗೊಂಡ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಲು ಸೂಚಿಸಿದ್ದು, ವಿಫಲವಾದಲ್ಲಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.

ಡಿ.31 ರ ಬಂದ್ ಮತ್ತು ನೈಟ್ ಕರ್ಫ್ಯೂ ಗೆ ಸಂಬಂಧಿಸಿದಂತೆ ವ್ಯಾಪಾರಿಗಳ ಆಕ್ಷೇಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ನಿಯಮಾವಳಿಯನ್ನು ಶಿವಮೊಗ್ಗದ ಜನತೆ ಮತ್ತು ವ್ಯಾಪಾರಿಗಳು ಆರೋಗ್ಯದ ದರಷ್ಠಿಯಿಂದ ಬೆಂಬಲಿಸುತ್ತಾ ಬಂದಿದ್ದು, ಕೊರೋನಾ ಹಿನ್ನಲೆಯಲ್ಲಿ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳು ಶಿವಮೊಗ್ಗದಲ್ಲೂ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ. ಕೆಲವು ಅಪಸ್ವರಗಳು ಬರುವುದು ಸಹಜ. ಆದರೆ, ಆರೋಗ್ಯವಿದ್ದರೆ ಯಾವಾಗ ಬೇಕಾದರೂ ದುಡಿಮೆ ಮಾಡಿಕೊಳ್ಳಬಹುದೆಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸುವ ವಿಚಾರವಾಗಿ ಈಗಾಗಲೇ ಸರ್ಕಾರ ಚರ್ಚೆ ನಡೆಸಿದೆ. ರಾಜ್ಯದ ಗಡಿ, ಜಲ ವಿಚಾರದಲ್ಲಿ ರಾಜೀಯ ಪ್ರಶ್ನೆಯೇ ಇಲ್ಲ ಎಂದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿ, ಮೇಕೆದಾಟು ಯೋಜನೆ ಜಾರಿಗೆ ತಂದಿದ್ದೆ ಬಿಜೆಪಿ. ಕೇಂದ್ರ ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಜಾರಿಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.ಮತಾಂತರ ಕಾಯ್ದೆ ಬಗ್ಗೆ ಡದೇನು ದೊಡ್ಡ ವಿಷಯವಲ್ಲ ಎಂದು ಸಿದ್ಧರಾಮಯ್ಯನವರು ಈಗ ಹೇಳಿಕೆ ನೀಡುತ್ತಿದ್ದಾರೆ. ಆ ಬಿಲ್ ಅನ್ನು ಮೊದಲು ಜಾರಿಗೆ ತರಲು ಪ್ರಯತ್ನಿಸಿದ್ದೇ ಕಾಂಗ್ರೆಸ್. ಸದನದ ಸಮಯವನ್ನು ವ್ಯರ್ಥಗೊಳಿಸಿದ್ದೇಕೆ ಎಂದು ಪ್ರಶ್ನಿಸಿದರು.ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಬದಲು ಮತಾಂತರ ಕಾಯ್ದೆ ಬಗ್ಗೆ ಕ್ಯಾತೆ ತೆಗೆದು ಉತ್ತರ ಕರ್ನಾಟಕದ ಜನತೆಗೆ ದ್ರೋಹ ಮಾಡಿದ್ದಾರೆ. ಈಗ ಮೇಕೆದಾಟು ಯೋಜನೆಯ ಕ್ಯಾತೆ ತೆಗೆದು ಅಣ್ಣ ತಮ್ಮಂದಿರಂತೆ ಇರುವ ತಮಿಳು ಮತ್ತು ಕನ್ನಡ ಭಾಷಿಕರನ್ನು ಎತ್ತಿಕಟ್ಟಿ ಸಮಾಜದ ಶಾಂತಿ ಕದಡುವ ಹುನ್ನಾರ ಕಾಂಗ್ರೆಸ್ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.ಈ ಸಂದರ್ಭದಲ್ಲಿ ಬಿಜೆಪಿಯ ಹಲವು ಪ್ರಮುಖರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…