ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2019 -20 ಹಾಗೂ 21 ನೇ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

2014 ನೇ ಸಾಲಿನಿಂದ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಎಸ್.ಸಿ., ಎಸ್.ಟಿ. ಉಪ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಅಂದಾಜಿ 1.30 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಯೋಜನೆಗಳಿಂದ ಸಬಲೀಕರಣಗೊಂಡ ಕುಟುಂಬಗಳೆಷ್ಟು, ರಾಜ್ಯದ ಜನಸಂಖ್ಯೆಯಲ್ಲಿ ಎಸ್.ಸಿ., ಎಸ್.ಟಿ. ಬಿಪಿಎಲ್ ಕುಟುಂಬಗಳಿಗೆ ಈ ಹಣ ತಲುಪಿದ್ದರೆ ಸಂಪೂರ್ಣ ಸಬಲೀಕರಣಗೊಳ್ಳುತ್ತಿದ್ದವು. ಈ ಉಪ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡದೇ ಇರುವುದರಿಂದ ಹಣ ಬಳಕೆಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಹಣ ಒಂದು ವೇಳೆ ಬಳಕೆಯಾಗಿರುವ ಅಲ್ಪಸ್ವಲ್ಪ ಯೋಜನೆ ಉಪಯೋಗವೂ ಸಹ ಎಸ್.ಸಿ., ಎಸ್.ಟಿ.ಯವರಿಗೆ ಉಪಯೋಗವಾಗಿಲ್ಲ. ಇದಕ್ಕೆ ಉದಾಹರಣೆ ಎಂದರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 2019 -20 ಹಾಗೂ 21 ನೇ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯ ಸುಮಾರು 5 ಕೋಟಿ ರೂ. ನಲ್ಲಿ ಕೈಗೊಂಡಿರುವ ಸಿಸಿ ರಸ್ತೆಗಳು ಎಸ್.ಸಿ. ಕಾಲೋನಿಯಲ್ಲಿ ನಿರ್ವಹಿಸದೇ ಎಸ್.ಸಿ. ಕಾಲೋನಿ ಹೊರತುಪಡಿಸಿ ಉಳಿದೆಡೆ ರಸ್ತೆಗಳಿಗೆ ಬಳಕೆ ಮಾಡಲಾಗಿದೆ ಎಂದು ದೂರಿದರು.ಎಸ್.ಸಿ. ಕಾಲೋನಿಯಲ್ಲಿ ಎಲ್ಇಡಿ ಹೈಮಾಸ್ಟ್ ದೀಪಗಳ ಅಳವಡಿಸದೇ ಬಹುತೇಕ ಹಳ್ಳಿಗಳಲ್ಲಿ ಮೇಲ್ವರ್ಗದವರ ಬೀದಿಗಳಲ್ಲಿ ಅಳವಡಿಸಲಾಗಿದೆ.

ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಎಸ್.ಸಿ. ಜನಾಂಗದವರೇ ಆದ ಶಾಸಕರು ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ತೋರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆದ್ದರಿಂದ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಒತ್ತಡಕ್ಕೆ ಮಣಿದು ಮೇಲ್ವರ್ಗದ ಕೇರಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಎಸ್.ಸಿ., ಎಸ್.ಟಿ. ಜನಾಂಗದವರಿಗೆ ಅನುಕೂಲವಾಗಿದೆ ಎಂದು ಸುಳ್ಳು ಸ್ಥಳ ತನಿಖಾ ವರದಿ ನೀಡಿರುವ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕು ಸಮಾಜಕಲ್ಯಾಣಾಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಈ ಕಾಮಗಾರಿಗಳನ್ನು ಎಸ್.ಸಿ. ಕಾಲೋನಿಗಳಲ್ಲಿ ಕಾಮಗಾರಿ ಮಾಡದೇ ಬೇರೆ ಕಡೆ ಮಾಡಿರುವ ಕೆ.ಆರ್.ಐ.ಡಿ.ಎಲ್. ಸಂಸ್ಥೆಯ ಬಿಲ್ ತಡೆಹಿಡಿದು ಅಕ್ರಮವೆಸಗಿರುವ ನಿಗಮದ ಕಾರ್ಯಪಾಲಕ ಅಭಿಯಂತರರ ಮೇಲೆ ಎಸ್.ಸಿ. ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣ ದಾಖಲಿಸಿ ದುರುಪಯೋಗವಾಗಿರುವ ಹಣವನ್ನು ಈ ನಿಗಮದಿಂದ ಮರುಪಾವತಿ ಮಾಡಿ ಎಸ್.ಸಿ. ವರ್ಗದ ಕಾಲೋನಿಗಳಲ್ಲಿ ಮರು ಬಳಕೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಪರಮೇಶ್ ಸೂಗೂರು, ಶೇಷಪ್ಪ ಹುಣಸೋಡು, ಜಗ್ಗು, ಮೀನಾ, ರುದ್ರಮ್ಮ, ಕೃಷ್ಣ, ನಾಸಿಕ್ ಬಾಬು ಇನ್ನಿತರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…