ಶಿವಮೊಗ್ಗ: ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಐಎನ್ಎ)ದಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಫೆಬ್ರವರಿ 5 ರಂದು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ, ಇದೊಂದು ಜಿಹಾದಿನ ಷಡ್ಯಂತ್ರ. ಮುಸಲ್ಮಾನ ವಿಧ್ಯಾರ್ಥಿಗಳ ಮೂಲಕ ಶಾಲಾ -ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಕರಣದ ಹಿಂದೆ ದೇಶದ್ರೋಹಿ ಸಂಘಟನೆಗಳಾದ ಪಿಎಫ್ಐ ಮತ್ತು ಎಸ್.ಡಿ.ಪಿ.ಐ. ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದ್ದು, ಸಿಎಫ್ಐ(ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಎಂಬ ಮುಸ್ಲಿಂ ಮೂಲಭೂತವಾದಿ ವಿದ್ಯಾರ್ಥಿ ಸಂಘಟನೆ ಉಡುಪಿ ಮತ್ತು ಮಣಿಪಾಲದ ರಹಸ್ಯ ಸ್ಥಳದಲ್ಲಿ ಹಿಜಾಬ್ ಧರಿಸಲು ಅನುಮತಿ ಕೇಳಬೇಕು ಮತ್ತು ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸಲು ಯುವತಿಯರಿಗೆ ತರಬೇತಿ ನೀಡಿದ್ದಾರೆ ಎಂದು ದೂರಿದರು.ಅಲ್ಲದೆ ಇದರ ಹಿಂದೆ ಪಾಕಿಸ್ತಾನ, ಅಫಘಾನಿಸ್ಥಾನ, ತಾಲಿಬಾನಿ ಮಾನಸಿಕತೆಯ ಇಸ್ಲಾಂ ಮೂಲಭೂತವಾದಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಮುಸ್ಲಿಂ ದೇಶಗಳೆಂದೇ ಬಿಂಬಿತವಾಗಿರುವ ದೇಶಗಳಲ್ಲಿ ಹಿಜಾಬ್, ಬುರ್ಖಾ ಕಡ್ಡಾಯವಿಲ್ಲದಾಗ ಭಾರತದ ಹಿಜಾಬ್ ವಿಷಯವನ್ನ ದೊಡ್ಡದಾಗಿ ಬಿಂಬಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ಪಾಲಿಸದೆ, ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದು ಇವರ ಜಿಹಾದಿ ಮಾನಸಿಕತೆಯನ್ನು ತೋರಿಸುತ್ತಿದೆ. ನವೆಂಬರ್ ತಿಂಗಳಲ್ಲಿ ಹಿಜಾಬ್ ವಿವಾದ ಎಬ್ಬಿಸಿದ ಯುವತಿಯರು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರ ವಿರೋಧಿ ಸಂದೇಶ ಪೋಸ್ಟ್ ಮಾಡುವುದರೊಂದಿಗೆ ಸಿಎಫ್ಐ ಸಂಘಟನೆ ಮಾಡುವ ಎಲ್ಲ ಸಂದೇಶಗಳಿಗೆ ಮರು ಸಂದೇಶ ಮಾಡುವುದರ ಜತೆಗೆ, ಈ ಯುವತಿಯರು ಹಿಜಾಬ್ ಪ್ರಕರಣವನ್ನು ಈ ರೀತಿ ಬಿಂಬಿಸಲು ವ್ಯವಸ್ಥಿತ ಸಂಚು ಮಾಡಿರುವುದರ ಹಿಂದೆ ಅಂತಾರಾಷ್ಟ್ರೀಯ ಇಸ್ಲಾಂ ಮೂಲಭೂತ ಸಂಘಟನೆಗಳ ಕೈವಾಡವಿರುವ ಸಂಶಯ ದಟ್ಟವಾಗಿದೆ ಎಂದರು.

ಉಚ್ಛನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಪಾಲಿಸದೇ ಕೇವಲ ವಿದ್ಯಾರ್ಥಿನಿಯರು ಅಲ್ಲದೆ, ಮುಸ್ಲಿಂ ಶಿಕ್ಷಕಿಯರು ಹಿಜಾಬ್ ಧರಿಸಿ ಬರುತ್ತಿದ್ದು, ಆ ಮೂಲಕ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದರು.ಈ ಹಿನ್ನಲೆಯಲ್ಲಿ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ರೂಪಿಸಲು ಹಾಗೂ ಕೋಮುಗಲಭೆ ಸೃಷ್ಟಿಸಿ ಇಡೀ ಕರ್ನಾಟಕವನ್ನ ಭಯಗ್ರಸ್ಥ ಮಾಡಿ ಶಾಂತಿ ಕದಡಲು ಹೊರಟಿರುವ ಸಂಚನ್ನು ವಿಫಲಗೊಳಿಸಬೇಕು, ಉಡುಪಿ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿನಿಯರನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತು ಸಂಚನ್ನು ರೂಪಿಸಿದವರ ವಿರುದ್ಧ ಎನ್ಐಎ(ರಾಷ್ಟ್ರೀಯ ತನಿಖಾ ದಳ) ಮುಖಾಂತರ ತನಿಖೆ ನಡೆಸಲು ಆದೇಶಿಸಬೇಕು ಮತ್ತು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ವಾಸುದೇವ್, ರಾಜೇಶ್ ಗೌಡ, ಸತೀಶ್, ನಾರಾಯಣ್ ವರ್ಣೇಕರ್, ಸುಧಾಕರ್ ಮತ್ತಿತರರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…