ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಅಶಾಂತಿ ಮನೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಣದ ಕೈಗಳು ಹೇಳಿದಂತೆ ಆಡಳಿತ ನಡೆಸುತ್ತಿದ್ದು, ರಾಜ್ಯದಲ್ಲಿ ಬೆಂಕು ಹಚ್ಚುವ ಕೆಲಸದಲ್ಲಿ ಬಿಜೆಪಿ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ನ ಒಂದು ಗುಂಪು ಸಹಕರಿಸುತ್ತಿದೆ. ರಾಜ್ಯದಲ್ಲಿ ನಡೆದಿರುವ ಗಲಾಟೆ, ಗಲಭೆ ಗೊಂದಲಗಳನ್ನು ತಡೆಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನ ಹಲವು ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಅಗತ್ಯ ಎಂದರು.

ಪ್ರಮೋದ್ ಮುತಾಲಿಕ್ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ಹಿಂದೂ ಧರ್ಮದ ಮುಖಂಡರ ವಿರುದ್ಧ ವಾಗ್ದಾಳಿ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಕಲುಷಿತ ವಾತಾವರಣ ಇದ್ದು, ಇದು ಇನ್ನೂ ಒಂದು ವರ್ಷ ಮುಂದುವರೆಯಲಿದೆ ಎಂದರು.ಶೇಕಡ 40 ರಷ್ಟು ಕಮಿಷನ್ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ ಅವರು ಇದರಲ್ಲಿ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಗುತ್ತಿಗೆದಾರರು ಹೇಗೆ ಕೆಲಸ ಮಾಡಬೇಕು? ಮತ್ತು ರಾಜಕಾರಣಿಗಳ ಹತ್ತಿರ ದುಂಬಾಲು ಬೀಳಬೇಕು ಎಂದರು.

ಕಾಂಗ್ರೆಸ್ ನಾಯಕರು ಅಪ್ಪಟ ಚಿನ್ನಗಳಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೆ. ಆಗ ಇದೇ ಸಿದ್ಧರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ಮೌನವಾಗಿದ್ದರು. ಇದು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದ ಅವರು, ಸ್ಥಳೀಯ ಶಾಸಕರ ಅನುಮತಿ ಇಲ್ಲದೇ ಟೆಂಡರ್ ಪ್ರಕ್ರಿಯೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ನಾನು ಬಿಜೆಪಿ ಪರವೂ ಅಲ್ಲ, ವಿರೋಧವೂ ಅಲ್ಲ. ಸತ್ಯದ ಬಗ್ಗೆ ಮಾತನಾಡುವೆ. ಈಶ್ವರಪ್ಪ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಅವರೇನು ನೆಂಟರಾ? ಅವರ ರಾಜೀನಾಮೆಗೆ ನಾನೇ ಒತ್ತಾಯಿಸಿದ್ದೆ ಎಂದರು.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆಯಾಗಬೇಕು ಎಂದರು. ನಂತರ ಕೂಡ್ಲಿಯಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವರದಿ ಮಂಜುನಾಥ್ ಶೆಟ್ಟಿ…