ತಂಬಾಕು ವ್ಯಸನದ ದುಷ್ಪರಿಣಾಮಗಳಿಂದಾಗಿ ಪ್ರಪಂಚದಾದ್ಯಂತ ಪ್ರತೀ 06 ಸೆಕೆಂಡ್‍ಗೆ ಒಬ್ಬರು ಸಾವನ್ನಪ್ಪುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಶಿವಮೊಗ್ಗ ಜಿಲ್ಲಾ ಸಲಹೆಗಾರ ಹೇಮಂತ್‍ರಾಜ್ ಅರಸ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯವು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಂಬಾಕು ಮುಕ್ತ ವಿಶ್ವವಿದ್ಯಾಲಯ ಘೋಷಣಾ ಪೂರ್ವಕಾರ್ಯಕ್ರಮ ಮತ್ತು ಅರಿವುಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿಯೂ ತಂಬಾಕು ವ್ಯಸನದ ದುಷ್ಟರಿಣಾಮಗಳು ತೀವ್ರವಾಗಿವೆ. ದೇಶದ ಶೇ. 35ರಷ್ಟು ಜನಸಂಖ್ಯೆ ತಂಬಾಕು ಬಳಕೆ ಮಾಡುತ್ತಿದ್ದು, ಪ್ರತೀವರ್ಷ 10 ಲಕ್ಷಜನರು ತಂಬಾಕಿನಿಂದಾಗಿ ಬರುವ ಕ್ಯಾನ್ಸರ್, ಪಾಶ್ರ್ವವಾಯು, ಕ್ಷಯರೋಗ, ನ್ಯುಮೋನಿಯಾ, ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದರು.

ಸಿಗರೇಟನ್ನು ಏಳು ಸಾವಿರ ರೀತಿಯ ವಿಷಯುಕ್ತ ರಾಸಯನಿಕ ವಸ್ತುಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ನೇರವಾಗಿ ಸೇವನೆ ಮಾಡುವವರಿಗಲ್ಲದೇ, ಪಕ್ಕದಲ್ಲಿಇದ್ದಾಗ ಆಗುವ ಪರೋಕ್ಷ ಸೇವನೆಯು ಆರೋಗ್ಯದ ಮೇಲೆ ಭಾರೀದುಷ್ಪರಿಣಾಮ ಬೀರುತ್ತದೆ. ಸ್ನೇಹಿತರು, ಸೆಲೆಬ್ರಿಟಿಗಳ ತಂಬಾಕು ಸೇವನೆ ಯುವಕರ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ. ಯೋಗ, ಧ್ಯಾನ, ಉತ್ತಮ ಸ್ನೇಹ ವಲಯಗಳು, ಪೋಷಕರ ಕಾಳಜಿಯಿಂದ ತಂಬಾಕಿನಿಂದ ದೂರವುಳಿಯುವುದು ಸಾಧ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಹಿಂದೆ ಶ್ರೀಮಂತರು ತಮ್ಮ ವೈಭವಗಳನ್ನು ಪ್ರದರ್ಶಿಸಲು ತಂಬಾಕು ಬಳಕೆ ಹುಟ್ಟುಹಾಕಿದರು. ಇಂದು ಅದುವೇ ವ್ಯಸನವಾಗಿ ಪರಿವರ್ತನೆ ಹೊಂದಿ ಯುವಜನರ ಬದುಕನ್ನು ನಾಶಪಡಿಸುತ್ತಿದ್ದು, ದೇಶದ ಬೆಳವಣಿಗೆಗೆ ಅಡ್ಡಿಯಾಗುವ ಹಂತಕ್ಕೆ ಬೆಳೆದಿದೆ. ಈ ಕುರಿತುದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ವಿವಿಯುಕೈಗೊಂಡಿದ್ದು, ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‍ಕುಮಾರ್, ಆರೋಗ್ಯಾಧಿಕಾರಿಗಳು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…