ಶಿವಮೊಗ್ಗ: ಶಾಲಾ ಮಕ್ಕಳ ಪಠ್ಯ ಮಸ್ತಕಗಳನ್ನು ಪರಿಷ್ಕರಣೆ ಮಾಡಿರುವ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ತಿಪಟೂರು ನಗರದ ಮನೆಗೆ ಎನ್.ಎಸ್.ಯು.ಐ ಕಾರ್ಯಕರ್ತರು ಮುತ್ತಿಗೆ ಹಾಕಿ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದು, ಇಂತಹ ಗೂಂಡಾ ಪ್ರವೃತ್ತಿಯ ವರ್ತನೆಗಳನ್ನು ತೀವ್ರವಾಗಿ ಖಂಡಿಸುವುದಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದ್ದಾರೆ.

ಈ ರೀತಿ ಏಕಾಏಕಿಯಾಗಿ ಸಚಿವರ ಮನೆಯ ಮುಂದೆ ಗಲಾಟೆ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಾಡಿನ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಪಠ್ಯ ಪುಸ್ತಕ ರೂಪಿಸಲು ಶ್ರಮಿಸುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.ನಾಡಿನ ಖ್ಯಾತ ಕವಿಗಳು ಮತ್ತು ಲೇಖಕರಿಗೆ ಅವಮಾನಕರ ರೀತಿಯಲ್ಲಿ ಮಾತನಾಡಿರುವುದು, ಅವರು ರಚಿಸಿದ ಕವನಗಳು(ಕವಿತೆಗಳು) ಮತ್ತು ಗದ್ಯ ಪಾಠಗಳ ಬಗ್ಗೆ ಆಕ್ಷೇಪಾರ್ಹ ಮತ್ತು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ ಆಗುವುದಿಲ್ಲ. ಎಳೆಯ ವಯಸ್ಸಿನ ಶಾಲಾ ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.

ಪಠ್ಯಮಸ್ತಕದಲ್ಲಿ ಏನಾದರೂ ಲೋಪದೋಷಗಳು ಅಥವಾ ವ್ಯತ್ಯಾಸಗಳು ಕಂಡು ಬಂದರೆ ಆ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯವರು, ಶಿಕ್ಷಣ ತಜ್ಞರು ಹಾಗೂ ನಾಡಿನ ಸಾಹಿತಿಗಳು ಹಾಗೂ ಲೇಖಕರು ಸರ್ಕಾರದ ಜೊತೆಗೆ ಕೈಜೋಡಿಸಿ ಒಂದೆಡೆ ಕುಳಿತು ಚರ್ಚಿಸಿ, ವಿಮರ್ಶೆ ನಡೆಸಿ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡು ಸರಿಪಡಿಸಬಹುದಾಗಿದೆ. ಈ ವಿಷಯವಾಗಿ ಕೆಲವು ಶಿಕ್ಷಣ ತಜ್ಞರು, ಕವಿಗಳು, ಲೇಖಕರುಗಳು ಮತ್ತು ಕೆಲವು ಜನಪ್ರತಿನಿಧಿಗಳು ಮಾಧ್ಯಮಗಳಿಗೆ ದಿನಕ್ಕೊಂದು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಾ, ಜನಸಾಮಾನ್ಯರನ್ನು ಗೊಂದಲಕ್ಕೆ ಈಡು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ

ವರದಿ ಮಂಜುನಾಥ್ ಶೆಟ್ಟಿ…