ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸುಕ್ಷೇತ್ರ ಬ್ರಹ್ಮವಿದ್ಯಾನಗರದಲ್ಲಿ ಜೂ. 3, 4 ರಂದು ಅಖಿಲ ಭಾರತ ಭಗೀರಥ ಜಯಂತ್ಯುತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಭಗೀರಥ ದೇವಸ್ಥಾನ ಪ್ರಸಾದ ನಿಲಯ, ಸಭಾಮಂಟಪ ಲೋಕಾರ್ಪಣೆಗೊಳ್ಳಲಿದೆ ಎಂದು ಶಿವಮೊಗ್ಗ ಉಪ್ಪಾರ ಸಮಾಜದ ಅಧ್ಯಕ್ಷ ಎಸ್.ಟಿ. ಹಾಲಪ್ಪ ತಿಳಿಸಿದರು.

ಇಂದು ಜಿಲ್ಲಾ ಉಪ್ಪಾರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ 2 ಲಕ್ಷಕ್ಕೂ ಅಧಿಕ ಸಮಾಜ ಬಾಂಧವರು ಆಗಮಿಸಲಿದ್ದು, ಶಿವಮೊಗ್ಗ ಜಿಲ್ಲೆಯಿಂದ ಮೂರು ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.ಶ್ರೀಮದ್ ಜಗದ್ಗುರು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನ ಭಗೀರಥ ಪೀಠ, ಮಹಾಸಂಸ್ಥಾನಮಠ ಬ್ರಹ್ಮವಿದ್ಯಾನಗರ ಸುಕ್ಷೇತ್ರ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗೀರಥ ಜಾನಪದ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಡಾ. ಪುರುಷೋತ್ತಮಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಜೂ. 3 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸರ್ಕಾರದಿಂದ ಆಚರಿಸುವ ಎಲ್ಲಾ ಜನಾಂಗಗಳ ಸಂತರ, ಶರಣರ ಹಾಗೂ ಮಹಾತ್ಮರ ಭಾವಚಿತ್ರದೊಂದಿಗೆ ಪೂರ್ಣಕುಂಭ ಮೇಳ ಹಾಗೂ ಕಲಾತಂಡಗಳಿಂದ ಹೊಸದುರ್ಗ ಪಟ್ಟಣದಿಂದ ಭವ್ಯ ಮೆರವಣಿಗೆ ನಡೆಯಲಿದೆ.

ಮೆರವಣಿಗೆಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಪುಷ್ಪಾರ್ಚನೆ ಮಾಡಲಿದ್ದಾರೆ. ಶಾಸಕ ಗೂಳಿಹಟ್ಟಿ ಡಿ. ಶೇಖರ್ ಉದ್ಘಾಟಿಸಲಿದ್ದಾರೆ.ಕಲಾತಂಡಗಳ ಉದ್ಘಾಟನೆಯನ್ನು ಹೊಸದುರ್ಗ ಪುರಸಭೆ ಅಧ್ಯಕ್ಷ ಎಂ. ಶ್ರೀನಿವಾಸ್ ನೆರವೇರಿಸಲಿದ್ದಾರೆ.ಮಧ್ಯಾಹ್ನ 2 ಗಂಟೆಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭ, ಸಂಜೆ 5 ಗಂಟೆಗೆ ಧಾರ್ಮಿಕ ಹಾಗೂ ನಗೆಹಬ್ಬ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಗೌರವಾಧ್ಯಕ್ಷ ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು. ಸಂಜೆ 5 ಗಂಟೆಗೆ ನಗೆಹಬ್ಬ ಮತ್ತು  ಸಾಂಸ್ಕೃತಿಕ ಹಬ್ಬವನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು ಎಂದು ಅವರು ತಿಳಿಸಿದರು. ಜೂ. 4 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಉಪ್ಪಾರರ ಬೃಹತ್ ಸಮಾವೇಶ ಹಾಗೂ ಭಗೀರಥ ಜಯಂತ್ಯುತ್ಸವ ಮತ್ತು ಧಾರ್ಮಿಕ ಸಮಾರಂಭ ನಡೆಯಲಿದೆ.

ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಸಮಾವೇಶವನ್ನು ವಿಧಾನಸಭೆ ವಿಪಕ್ಷನಾಯಕ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ಸಭಾಮಂಟಪವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಡಾ. ಶಿವಮೂರ್ತಿ ಮುರಘಾ ಶರಣರು ಸಾನಿಧ್ಯ ವಹಿಸಲಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಭಗೀರಥ ಜಯಂತ್ಯುತ್ಸವ ಹಾಗೂ ಭಗೀರಥ ದೇವಸ್ಥಾನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಶ್ರೀ. ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ರಾಜ್ಯದಲ್ಲಿ 45 ಲಕ್ಷಕ್ಕೂ ಜನಸಂಖ್ಯೆ ನಮ್ಮ ಸಮಾಜ ತುಳಿತಕ್ಕೊಳಗಾಗಿದ್ದು, ಸರ್ಕಾರದಿಂದ ಹಲವು ವರ್ಷಗಳಿಂದ ಕೊಡುತ್ತಿರುವ ಸೌಲಭ್ಯ ಕಡಿತಗೊಳಿಸಲಾಗಿದೆ. ಉಪ್ಪಾರ ಸಮಾಜವನ್ನು ಎಸ್.ಟಿ.ಗೆ ಸೇರ್ಪಡೆ ಮಾಡಬೇಕೆಂದು ಸಮಾವೇಶದಲ್ಲಿ ಗಣ್ಯರಿಗೆ ಮನವಿ ಸಲ್ಲಿಸಲಾಗುವುದು. ಈ ಸಮಾವೇಶಕ್ಕೆ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ. ದೇವೆಂದ್ರಪ್ಪ, ಖಜಾಂಚಿ ನಾಗರಾಜ್ ಕಂಕಾರಿ, ಕಾರ್ಯದರ್ಶಿ ರವಿ, ನಿರ್ದೇಶಕ ಹಾರನಹಳ್ಳಿ ರವಿಕುಮಾರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…