ಯಾವುದೇ ರೀತಿಯ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಮರ್ಪಕವಾಗಿ ಅಂಕಿಅಂಶಗಳ ಬಳಕೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಭಾರತದ ಸಾಂಖ್ಯಿಕ ಪಿತಾಮಹ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಇವರ ಜನ್ಮದಿನಾಚರಣೆ ಪ್ರಯುಕ್ತ ಆಚರಿಸಲಾಗುತ್ತಿರುವ ಸಾಂಖ್ಯಿಕ ದಿನಾಚರಣೆ ಅಂಗವಾಗಿ ಇಂದು ಜಿ.ಪಂ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಶಿಕ್ಷಣ, ಆರೋಗ್ಯ, ಪೌಷ್ಟಿಕತೆ’ ವಿಷಯ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ದೇಶದ ಎದುರಿಗಿದ್ದ ಸವಾಲು ಆಹಾರ. ಹಸಿವುಮುಕ್ತ ದೇಶವನ್ನಾಗಿಸಲು ಸಹಕರಿಸಿದ್ದು ಅಂಕಿಅಂಶ ಆಧಾರಿತ ಯೋಜನೆಗಳು. ಹೀಗೆ ಯಾವುದೇ ಯೋಜನೆ ರೂಪಿಸಲು ಮೊದಲು ನಮಗೆ ನಿಖರವಾದ ಅಂಕಿಅಂಶಗಳು ಬೇಕು. ಇಂತಹ ಅಂಕಿಅಂಶಗಳನ್ನು ಹೇಗೆ ಸಂಗ್ರಹಿಸಬೇಕು, ಹೇಗೆ ಬಳಕೆ ಮಾಡಬೇಕೆಂಬುದನ್ನು ತೋರಿಸಿಕೊಟ್ಟ ಉನ್ನತ ವ್ಯಕ್ತಿ ಪ್ರೊ.ಪಿ.ಸಿ.ಮಹಾಲನೋಬಿಸ್. ಪಂಚವಾರ್ಷಿಕ ಯೋಜನೆಗಳು ಸೇರಿದಂತೆ ಬಹಳಷ್ಟು ಕೊಡುಗೆಗಳನ್ನು ದೇಶಕ್ಕೆ ಅವರು ನೀಡಿದ್ದಾರೆ.

ಪ್ರತಿದಿನ ನಾವು ಕಚೇರಿಯಲ್ಲಿ ಅಂಕಿಅಂಶಗಳನ್ನು ನೋಡುತ್ತೇವೆ. ಒಂದು ಅಂಕಿಅಂಶ ಸಂಗ್ರಹಿಸಲು ನಾವು ಎಷ್ಟೆಲ್ಲಾ ಕಷ್ಟಪಡುತ್ತೇವೆ. ಆದರೆ ಯೋಜಿತ ರೂಪದಲ್ಲಿ ದತ್ತಸಂಗ್ರಹ ಮಾಡುವುದನ್ನು ಕರಗತ ಮಾಡಿಕೊಂಡಲ್ಲಿ ಒಂದು ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಇತ್ತೀಚೆಗೆ ಸಂಖ್ಯಾಶಾಸ್ತ್ರದಲ್ಲಿ ಹಲವಾರು ಪ್ರಗತಿ ಕಂಡಿದ್ದೇವೆ. ಸಂಖ್ಯಾಶಾಸ್ತ್ರ ಡೇಟಾಸೈನ್ಸ್ ಆಗಿ ಪರಿವರ್ತನೆ ಆಗಿದೆ. ಹಲವು ಉನ್ನತ ವಿಶ್ವವಿದ್ಯಾಲಯಗಳು ಈಗಾಗಲೇ ಡೇಟಾಸೈನ್ಸ್‍ನ್ನು ಆರಂಭಿಸಿವೆ. ಸಂಖ್ಯಾಶಾಸ್ತ್ರದ ವ್ಯಾಪ್ತಿ ವಿಸ್ತಾರವಾಗಿದ್ದು, ಅದನ್ನು ಅಭಿವೃದ್ದಿಗೆ ಪೂರಕವಾಗಿ ಬಳಕೆ ಮಾಡಿಕೊಳ್ಳುವದನ್ನು ತಿಳಿಯಬೇಕು ಎಂದರು.

ದೇಶದ ಸುಸ್ಥಿರ ಅಭಿವೃದ್ದಿ ಗುರಿಗಳ ಪೈಕಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ, ಆರೋಗ್ಯ ಪೌಷ್ಟಿಕಾಂಶ ವಿಷಯ ಕುರಿತು ಚರ್ಚಿಸಲು ಸರ್ಕಾರ ಈ ಕಾರ್ಯಾಗಾರ ಮಾಡುವಂತೆ ಸೂಚಿಸಿದೆ. ಈ ಮೂರು ಕ್ಷೇತ್ರಗಳ ಅಭಿವೃದ್ದಿಗೆ ಪೂರಕವಾಗಿ ಅಂಕಿಅಂಶ ಸಂಗ್ರಹಿಸಿ ಯೋಜನೆ ತಯಾರಿಸಿ ಯಶಸ್ವಿಗೊಳಿಸಬೇಕು. ಪೌಷ್ಟಿಕಾಂಶ ಎಲ್ಲರಿಗೂ ಲಭಿಸುತ್ತಿಲ್ಲ. ಇಂದಿಗೂ ಬಹಳಷ್ಟು ಮಕ್ಕಳು, ವಯಸ್ಕರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಂಬಂಧ ದತ್ತಸಂಗ್ರಹಣೆ ಮಾಡಿ, ಸಮರ್ಪಕ ಯೋಜನೆ ರೂಪಿಸಬೇಕು ಎಂದ ಅವರು ಇಂತಹ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಿ ಉನ್ನತ ಸಮುದಾಯ ನಿರ್ಮಿಸೋಣ ಎಂದರು.

ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ನಮ್ಮ ಇಲಾಖೆ ಕಾರ್ಯಕ್ರಮಗಳ ಮೂಲಕವೇ ಹೇಗೆ ಅಂಕಿಅಂಶಗಳ ಮೂಲಕ ಸುಸ್ಥಿರ ಅಭಿವೃದ್ದಿ ಸಾಧಿಸಬಹುದೆಂದು ಅನೇಕ ವೇಳೆ ಕಂಡುಕೊಂಡಿದ್ದೇವೆ. ನಿಖರವಾದ ಮತ್ತು ನೈಜವಾದ ಅಂಕಿಅಂಶಗಳ ಸಂಗ್ರಹ ಮತ್ತು ಅದರ ಮೇಲಿನ ವಿಶ್ಲೇಷಣೆಯಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕೆಂದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಉಮಾ ಟಿ ಎಸ್ ಮಾತನಾಡಿ, ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸರ್ಕಾರದ ವಿವಿಧ ಯೋಜನೆಗಳನ್ನು ರೂಪಿಸುತ್ತೇವೆ. ಯೋಜನೆ ರೂಪಿಸಲು ಮುಖ್ಯ ಆಧಾರ ಅಂಕಿಅಂಶಗಳು. ನಿಖರವಾದ ಅಂಕಿಅಂಶಗಳನ್ನಿಟ್ಟುಕೊಂಡು ದೂರದೃಷ್ಟಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಂಕಿಅಂಶ ಸಂಗ್ರಹ ಮತ್ತು ನಿರ್ವಹಣೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ಅಭಿವೃದ್ದಿ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಶ್ರಮಿಸೋಣ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶ ಕಂಡ ಶ್ರೇಷ್ಟ ಸಂಖ್ಯಾಶಾಸ್ತ್ರಜ್ಞರಾದ ಪ್ರೊ.ಪಿ.ಸಿ.ಮಹಾನೋಬಿಸ್‍ರವರು ಪ್ರಥಮ ಬಾರಿಗೆ 1931 ರಲ್ಲಿ ಸಂಖ್ಯಾಶಾಸ್ತ್ರವನ್ನು ಪರಿಚಯಿಸಿದರು. ದೇಶದ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಲು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಅನೇಕ ಸಮೀಕ್ಷೆಗಳನ್ನು ಕೈಗೊಂಡರು. ಆರ್ಥಿಕಾಭಿವೃದ್ದಿಗೆ ಅಂಕಿಅಂಶಗಳು ಬಹುಮುಖ್ಯ ಎಂದು ತೋರಿಸಿಕೊಟ್ಟು ಹಲವಾರು ಕ್ಷೇತ್ರಗಳಲ್ಲಿ ಸಮೀಕ್ಷೆ ಕೈಗೊಂಡು ಪಂಚವಾರ್ಷಿಕ ಯೋಜನೆಗಳು ಸೇರಿದಂತೆ ದೇಶಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಇವರ ಸ್ಮರಣಾರ್ಥ 2006 ರಲ್ಲಿ ಸರ್ಕಾರ ಇವರ ಜನ್ಮದಿನವನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸುತ್ತಿದೆ. ಅಭಿವೃದ್ದಿ ಯ 17 ಸುಸ್ಥಿರ ಅಭಿವೃದ್ದಿ ಗುರಿಗಳ ಪೈಕಿ ಈ ವರ್ಷ ಕೇಂದ್ರ ಸರ್ಕಾರವು ‘ಶಿಕ್ಷಣ, ಆರೋಗ್ಯ, ಪೌಷ್ಟಿಕತೆ’ ಎಂಬ ವಿಷಯ ಆಯ್ಕೆ ಮಾಡಿ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಂದ ಸುಸ್ಥಿರ ಅಭಿವೃದ್ದಿ ಕುರಿತು ಕಾರ್ಯಾಗಾರ ನಡೆಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

ತಾಲ್ಲೂಕು ಅಭಿವೃದ್ದಿ ಅಧಿಕಾರಿ ಸುರೇಶ್ ಪ್ರೊ.ಪಿ.ಸಿ.ಮಹಾಲನೋಬಿಸ್ ಕುರಿತು ಕಿರು ಪರಿಚಯ ಮಾಡಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಶಿಕ್ಷಣ ಕುರಿತು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ಆರೋಗ್ಯ ಕುರಿತು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗೂಬಾಯಿ ಇವರು ಪೌಷ್ಟಿಕತೆ ಕುರಿತು ಮಾತನಾಡಿ, ಅಂಕಿಅಂಶಗಳಾಧಾರಿತ ವಿವಿಧ ಯೋಜನೆಗಳು ಮತ್ತು ಅಭಿಯಾನದ ಮೂಲಕ ಸುಸ್ಥಿರ ಅಭಿವೃದ್ದಿ ಸಾಧಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು.

ವರದಿ ಮಂಜುನಾಥ್ ಶೆಟ್ಟಿ…