ಶಿವಮೊಗ್ಗ: ಪೌರಕಾರ್ಮಿಕರ ಮುಷ್ಕರಕ್ಕೆ ಯುವ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪೌರಕಾರ್ಮಿಕರು ರಾಜ್ಯದಾದ್ಯಂತ 1 ಜುಲೈ ರಿಂದ ಸ್ವಚ್ಛತಾ ಕಾರ್ಯ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಈ ಮುಷ್ಕರದಿಂದ ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಕಸ ವಿಲೇವಾರಿಯಾಗದೆ  ಕಸದ ರಾಶಿಗಳು ಕಂಡು ಬರುತ್ತಿವೆ. ನಗರ ಗಬ್ಬು ನಾರುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಸರ್ಕಾರ ಈಗಾಗಲೇ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ ಮಾತನ್ನು ತಪ್ಪಿ ಪೌರಕಾರ್ಮಿಕರು ಅನಿರ್ದಿಷ್ಟ ಕಾಲ ಮುಷ್ಕರ ನಡೆಸುತ್ತಿರುವ ಈ ಸಂದರ್ಭದಲ್ಲಿ ಈ ಭ್ರಷ್ಟ ಹಾಗೂ ಬಂಡ ಬಿಜೆಪಿ ಸರ್ಕಾರ ಪೌರಕಾರ್ಮಿಕರ ಸಮಸ್ಯೆಯನ್ನು ಆಲಿಸದೇ ಸಾರ್ವಜನಿಕರಿಗೂ ತೊಂದರೆ ನೀಡುತ್ತಾ ಮುಖ್ಯಮಂತ್ರಿಗಳು ತಮ್ಮ ಬಿಜೆಪಿ ಪಕ್ಷದ ಸಭೆಯಲ್ಲಿ ನಿರತರಾಗಿರುವುದು ನೋಡಿದರೆ ಈ ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಕಿಂಚಿತ್ತು ಅರಿವಿಲ್ಲ ಎಂಬುದು ಎದ್ದು ಕಾಣುತ್ತಿದೆ ಎಂದು ದೂರಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ 680 ಜನ ಪೌರಕಾರ್ಮಿಕರಿದ್ದು, ಅದರಲ್ಲಿ 200 ಜನ ಖಾಯಂ ಪೌರಕಾರ್ಮಿಕರಾಗಿದ್ದು, ಉಳಿದ ಎಲ್ಲಾ 400 ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.  ಶಿವಮೊಗ್ಗ ನಗರದಲ್ಲಿ ಪ್ರತಿದಿನ 175 ಟನ್ ಕಸ ವಿಲೇವಾರಿ ಆಗುತ್ತಿತ್ತು. ಆದರೆ, ಈಗ ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರಣ ಲೋಡ್ ಗಟ್ಟಲೆ ಕಸದ ರಾಶಿಗಳು ರಸ್ತೆಗಳಲ್ಲಿ ತುಂಬಿದ್ದು, ಚರಂಡಿಗಳು, ಒಳಚರಂಡಿಗಳು ಬ್ಲಾಕ್ ಆಗಿವೆ. ಶವಸಂಸ್ಕಾರದ ವಾಹನಗಳು ಇಲ್ಲದೆ ಅನಾನುಕೂಲವಾಗಿದ್ದು, ಕೂಡಲೇ ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ರಾಜ್ಯದಾದ್ಯಂತ ಪೌರಕಾರ್ಮಿಕರು ತಮ್ಮ ಕಾರ್ಯಗಳಿಗೆ ಹಿಂತಿರುಗಿಲು ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಈ ಬಂಡತನದ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ  ಸಾರ್ವಜನಿಕರು ರಸ್ತೆಗಳಿದ್ದು ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರೇಶ್, ಗ್ರಾಮಾಂತರ ಅಧ್ಯಕ್ಷ ಈ.ಟಿ. ನಿತಿನ್, ಪ್ರಮುಖರಾದ ಸುವರ್ಣಾ ನಾಗರಾಜ್, ಪುಷ್ಪಕ್ ಕುಮಾರ್, ಎಂ ರಾಕೇಶ್, ಇರ್ಫಾನ್,  ಸಂದೀಪ್ ಸುಂದರಾಜ್, ಇಮ್ರಾನ್ ಶಮೀರ್ ಖಾನ್, ಕೆ ಎಲ್ ಪವನ್ , ಮೊಹಮ್ಮದ್ ಫೈರೋಜ್, ಮೋಹನ ಸೋಮಿನಕೊಪ್ಪ, ಸೈಯದ್ ಜಮೀಲ್, ಸುಹಾಸ್ ಗೌಡ,  ರಾಜೀವ್ ರಾಯ್ಕರ್, ಶ್ರೀನಿವಾಸ್, ಪೂರ್ವಿಕ್, ಕಿರಣ್ ಕುಮಾರ್, ಅಬಿತ್ ಗೌಡ, ಗೋಪಿನಾಥ್, ರಾಕೇಶ್ ಇತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…