ಶಿವಮೊಗ್ಗ: ವೀರಶೈವ ಸಮಾಜ ಶಿವಮೊಗ್ಗದ ದೊಡ್ಡ ಆಸ್ತಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.ಅವರು ಇಂದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಬಸವಸದನ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಎರಡು ಹಿರಿಯ ಮಠದ ಸ್ವಾಮೀಜಿಗಳು ಶಿವಮೊಗ್ಗ ನಗರಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವೀರಶೈವ ಕಲ್ಯಾಣ ಮಂದಿರ ಮೊಟ್ಟ ಮೊದಲ ಕಲ್ಯಾಣಮಂದಿರವಾಗಿ ನಗರದಲ್ಲಿ ನಿರ್ಮಾಣವಾಯಿತು. ಬಳಿಕ ಸಮಾಜದ ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತಾ ಬಂದಿದೆ. ಎಲ್ಲಾ ವಿಚಾರಗಳಲ್ಲೂ ವೀರಶೈವ ಸಮಾಜದ ಮುಖಂಡರು ಕೊಡುಗೈ ದಾನಿಗಳಾಗಿ ನಗರಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು.ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಬಸವೇಶ್ವರ ವೀರಶೈವ ಸಮಾಜ ಕೆಲಸ ಮಾಡುತ್ತಾ ಬಂದಿದೆ. ಕೇವಲ ತಮ್ಮ ಸಮಾಜವಲ್ಲದೇ ಇತರ ಸಮಾಜಗಳಿಗೂ ಆದರ್ಶಪ್ರಾಯವಾಗಿದೆ. ಇದೇ ರೀತಿ ಸಮಾಜಸೇವೆ ಮುಂದುವರೆಯಲಿ ಮತ್ತು ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಆದಷ್ಟು ಬೇಗನೆ ಆಗಿ ಸಮಾಜಕ್ಕೆ ಒಂದು ಕೊಡುಗೆಯಾಗಲಿ. ನಮ್ಮೆಲ್ಲರ ಸಹಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶ್ರಾವಣ ಶುಕ್ರವಾರದಂದು ಅತ್ಯಂತ ಪವಿತ್ರ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆಯಾಗಿದೆ.

ಸಮಾಜದ ಹಿರಿಯರ ನೇತೃತ್ವದಲ್ಲಿ ಮುಂದಿನ ಪೀಳಿಗೆಗೆ ಉತ್ತರ ಕೊಡುವ ಕಾರ್ಯ ಈ ಸಮಾಜದಿಂದ ನಡೆದಿದೆ. ಸಮಾಜಕ್ಕೆ ಸುಮಾರು 30 ಕೋಟಿ ಗೂ ಹೆಚ್ಚು ಅನುದಾನವನ್ನು ಯಡಿಯೂರಪ್ಪ, ಈಶ್ವರಪ್ಪ ತಂದಿದ್ದಾರೆ. ಎರಡು ಎತ್ತುಗಳು ಸೇರಿ ಬೇಸಾಯ ಮಾಡಿದ ಹಾಗೆ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಗಳು, ಅಭಿವೃದ್ಧಿ ಕಾರ್ಯಗಳು ಮುಂದುವರೆದಿವೆ ಎಂದರು. 5 ಕೋಟಿ ರೂ. ವೆಚ್ಚದ ಎನ್.ಡಿ.ವಿ. ಹಾಸ್ಟೆಲ್, ಬಸವೇಶ್ವರ ಪುತ್ಥಳಿ ಸ್ಥಾಪನೆ, ಕಲ್ಯಾಣ ಕರ್ನಾಟಕ ಘೋಷಣೆ, ಸೋಮಿನಕೊಪ್ಪದಲ್ಲಿ ಸಮುದಾಯ ಭವನ, ಪುಟ್ಟರಾಜ ಗವಾಯಿ ಭವನ, ಬೆಕ್ಕಿನ ಕಲ್ಮಠದ ಅಭಿವೃದ್ಧಿ ಕಾರ್ಯ, ಹಾಸ್ಟೆಲ್ ಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ದಾನಿಗಳ ಸಹಕಾರದಿಂದ ಶಿವಮೊಗ್ಗದಲ್ಲಿ ಆಗಿದೆ. ವೀರಶೈವ ಸಮಾಜ ಅನೇಕ ವರ್ಷಗಳ ಇತಿಹಾಸ ಇರುವ ಒಂದು ಧರ್ಮವಾಗಿದ್ದು, ಒಳಪಂಗಡಗಳನ್ನು ಮರೆತು ಎಲ್ಲರೂ ಒಂದಾಗಿ ಒಟ್ಟಾಗಿ ಮುಷ್ಠಿಯಾಗಿ ಸಮರ್ಪಣಾ ಭಾವದಿಂದ ಶೋಷಿತರಿಗೆ ನೆರವು ನೀಡುವ ಕೆಲಸವಾಗಬೇಕು ಎಂದರು.

ಈ ಸಂದರ್ಭದಲ್ಲಿ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಡಾ. ಬಸವಮರುಳಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಬಿ.ಕೆ. ಸಂಗಮೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಅಧ್ಯಕ್ಷ ನಾಗರಾಜ್, ಪ್ರಮುಖರಾದ ಟಿ.ಬಿ. ಜಗದೀಶ್, ಟಿ.ವಿ. ಈಶ್ವರಯ್ಯ, ಎಸ್. ಮಲ್ಲೇಶಪ್ಪ, ರುದ್ರಮುನಿ ಸಜ್ಜನ್, ಚನ್ನವೀರಪ್ಪ, ತಾರಾನಾಥ್, ರೇಣುಕಾ ನಾಗರಾಜ್, ರತ್ನಮ್ಮ ಮಂಜುನಾಥ್, ಬಿ.ಜಿ. ಚಂದ್ರಪ್ಪ, ಸಮಾಜದ ಪ್ರಮುಖರು ಇದ್ದರು. 

ವರದಿ ಮಂಜುನಾಥ್ ಶೆಟ್ಟಿ…