ಶಿವಮೊಗ್ಗ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೈ ಎನ್ನುತ್ತಾ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧವೇ ಹರಿಹಾಯ್ದ ಘಟನೆ ಇಂದು ನಗರದ ಗೋಪಿ ವೃತ್ತದಲ್ಲಿ ನಡೆಯಿತು.

ಮಂಗಳವಾರ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕೊಲೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ನಗರದ ಗೋಪಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಭೆಯ ಕೊನೆಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸುವ ಸಂದರ್ಭದಲ್ಲಿ ಕೆಲವು ಯುವಕರು ಆಕ್ರೋಶವ್ಯಕ್ತಪಡಿಸುತ್ತಾ ಯೋಗಿ ಜೈ ಎಂದು ಘೋಷಣೆ ಕೂಗಿ ಯೋಗಿ ಸರ್ಕಾರದ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾನೂನು ತರಬೇಕು ಎಂದು ಒತ್ತಾಯಿಸಿದರು.ಹಿಂದೂ ಯುವಕರ ಹೆಣದ ಮೇಲೆ ರಾಜಕಾರಣ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರನ್ನು ಸಮಾಧಾನಪಡಿಸಲು ತೆರಳಿದ ಬಿಜೆಪಿ ಮುಖಂಡ ಚನ್ನಬಸಪ್ಪರನ್ನು ಕೆಲವು ಯುವಕರು ತರಾಟೆಗೆ ತೆಗೆದುಕೊಂಡರು. ನಮಗೆ ಬುದ್ಧಿ ಹೇಳಲು ಬರಬೇಡಿ. ಕೊಲೆ ಮಾಡಿದವರನ್ನು ಎನ್ ಕೌಂಟರ್ ಮಾಡಿ. ಪೊಲೀಸರು ಹಿಂದೂ ಸಮಾಜಕ್ಕೆ ಮಾತ್ರ ಲಾಠಿ ಬೀಸುತ್ತಾರೆ. ಆವಾಗ ನೀವು ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸಿದರು.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಿರುವಾಗ ಮುಖಂಡರು ಭಾಷಣ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಮುಖಂಡ ಭಾಷಣ ಬೇಕಿಲ್ಲ. ಕೂಡಲೇ ಹಿಂದೂ ಯುವಕರ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ವರದಿ ಮಂಜುನಾಥ್ ಶೆಟ್ಟಿ…