ಶಿವಮೊಗ್ಗ: ನಮ್ಮ ಜೀವನದಲ್ಲಿ ನಾವು ಮಾಡಿದ ಸೇವೆ ಸದಾ ಅವೀರಸ್ಮರಣೀಯ ಆಗಿರಬೇಕು. ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಕ್ಲಬ್ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರು ಸೇವಾ ನಿರಂತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೈಜೋಡಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಸುರಕ್ಷತೆ ಒದಗಿಸುವ ಕೆಲಸ ಮಾಡಬೇಕು. ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ನಿಲ್ಲಿಸಬೇಕು. ಮಹಿಳೆಯರನ್ನು ಗೌರವಿಸುವ ಜತೆಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ತಿಳಿಸಿದರು.

ಶರಣ್ಯ ಸಂಸ್ಥೆ, ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ವೃದ್ಧರ ಸೇವೆ, ರೋಗಿಗಳನ್ನು ನಿಸ್ವಾರ್ಥದಿಂದ ಆರೈಕೆ ಮಾಡುತ್ತಿರುವ ಸುನಂದಮ್ಮ, ಅನು ಹಾಗೂ ಹಿರಿಯ ಕವಯತ್ರಿ ಸೀತಾರತ್ನ ಅವರಿಗೆ ಇನ್ನರ್‌ವ್ಹೀಲ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸೇವಾ ಅನಿಸಿಕೆಗಳನ್ನು ಹಂಚಿಕೊಂಡರು.
ರಸಪ್ರಶ್ನೆಯಲ್ಲಿ ವಿಜೇತರಾದ ಸದಸ್ಯೆಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಲತಾ ಶಂಕರ್ ಅವರಿಂದ ಪ್ರಾರ್ಥನೆ, ಮಧುರಾ ಅವರಿಂದ ಸ್ವಾಗತ, ಬಿಂದು ವಿಜಯ್‌ಕುಮಾರ್ ಅವರಿಂದ ನಿರೂಪಣೆ, ವಾಣಿ ಪ್ರವೀಣ್, ಕಾರ್ಯದರ್ಶಿ ಉಮಾ ವೆಂಕಟೇಶ್ ಅವರು ವಂದನಾರ್ಪಣೆ ನಡೆಸಿಕೊಟ್ಟರು.

ಇನ್ನರ್‌ವ್ಹೀಲ್ ಜಿಲ್ಲಾ ಖಜಾಂಚಿ ಶಬರಿ ಕಡಿದಾಳ್, ವೇದಾ ನಾಗರಾಜ್, ವಿಜಯಾ ರಾಯ್ಕರ್, ಜಯಂತಿ ವಾಲಿ, ವೀಣಾ ಹರ್ಷ, ವೀಣಾ ಸುರೇಶ್, ಸುಮಾ, ವಿನೋದಾ, ನಿರ್ಮಲಾ ಮಹೇಂದ್ರ, ಶ್ವೇತಾ, ಆಶಿತಾ ಹಾಗೂ ಇನ್ನರ್‌ವ್ಹೀಲ್ ಸದಸ್ಯೆಯರು ಉಪಸ್ಥಿತರಿದ್ದರು.

ವರದಿ: ಸುರೇಶ್ ಬಿ ಎಸ್…