
ಶಿವಮೊಗ್ಗ: ವೇ.ಬ್ರ.ವಿನಾಯಕ ಬಾಯರಿ ಅವರನ್ನು ನನ್ನ ಕುಟುಂಬದ ಸದಸ್ಯನಂತೆ ಕಂಡಿದ್ದೆ. ಶ್ರೀ ಶನೈಶ್ಚರ ದೇವಸ್ಥಾನದ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದರು. ಬಾಯರಿ ಅವರ ಅಕಾಲಿಕ ಮರಣ ತುಂಬಲಾರದ ಹಾನಿ. ಅವರ ಕುಟುಂಬಕ್ಕೆ ಶ್ರೀ ಶನೈಶ್ಚರ ದೇವಾಲಯ ಸಮಿತಿಯಿಂದ 10ಲಕ್ಷ ರೂ.ಸಹಾಯಧನ ಮಾಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಘೋಷಿಸಿದರು.
ಬಾಯರಿ ಅವರ ಹಿರಿಯ ಪುತ್ರಿಗೆ ಪಾಯ್ಲೆಟ್ ಆಗುವ ಆಶಾಭಾವನೆ ಇದೆ. ಎರಡನೇ ಪುತ್ರಿಗೆ ಪಿಎಚ್.ಡಿ. ಮಾಡುವ ಆಸೆ ಇಟ್ಟುಕೊಂಡಿದ್ದಾಳೆ. ಅದನ್ನೂ ಈಡೇರಿಸುವ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಲ್ಲದೆ ಬಾಯರಿ ಪತ್ನಿಯವರಿಗೆ ಸಧ್ಯದಲ್ಲೇ ಸಿ.ಬಿ.ಎಸ್.ಸಿ.ಶಾಲೆ ಆರಂಭಿಸಲಿದ್ದೇವೆ. ಅಲ್ಲಿ ಅವರಿಗೆ ಜೀವನೋಪಾಯಕ್ಕೆ ನೌಕರಿ ಕೊಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀ ಶನೈಶ್ಚರ ದೇವಾಲಯದ ಸೇವಾ ಸಮಿತಿ ಟ್ರಸ್ಟ್, ಭಕ್ತ ವೃಂದ, ಅರ್ಚಕ ವೃಂದ, ಶ್ರೀಗಂಧ ಸಂಸ್ಥೆ, ಭಜನಾ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವೇ.ಬ್ರ.ವಿನಾಯಕ ಬಾಯರಿ ಅವರಿಗೆ ಹಮ್ಮಿಕೊಂಡ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ ಭಾಗ್ವತ್ ಮಾತನಾಡಿ, ವಿನಾಯಕ ಬಾಯರಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರು.
ನಾನು ಅಸ್ಪತ್ರಯಲ್ಲಿದ್ದಾಗ ಮೃತ್ಯುಂಜಯ ಜಪ ಹೋಮ ಮಾಡಿ ನನಗೆ ಮೃತ್ಯುವಿನ ಭಯ ಹೋಗಲಾಡಿಸಿದರು. ತಾವೇ ಮೃತ್ಯು ಧಾರಣೆ ಮಾಡಿದರು ಅ.ಪ.ರಾಮ ಭಟ್ಟರ ಮರಣದಿಂದ ಶೂನ್ಯ ಆವರಿಸಿತ್ತು. ಅದನ್ನು ತುಂಬುವ ಗುಣ ಹೊಂದಿದ್ದರು. ಶಿವಮೊಗ್ಗವನ್ನು ಕಲೆ-ಸಂಸ್ಕೃತಿಯ ಕೇಂದ್ರವಾಗಲು ಪ್ರಯತ್ನಿಸಿದ್ದರು ಎಂದರು.
ಸಂಸ್ಕೃತ ವಿದ್ವಾಂಸ ಡಾ.ಸನತ್ ಕುಮಾರ್ ಮಾತನಾಡಿ, ವಿನಾಯಕ ಬಾಯರಿ ಅವರು ಆದರ್ಶ ವ್ಯಕ್ತಿಯಾಗಿ, ಇತರರಿಗೆ ಮಾದರಿಯಾಗಿ, ಬದುಕಿದ್ದರು. ಮೃತರಿಗೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರಲ್ಲದೆ ಬಾಯರಿ ಅವರ ಮಕ್ಕಳ ಶಿಕ್ಷಣವನ್ನು ಸಮಾಜ ನೋಡಿಕೊಳ್ಳಬೇಕು ಎಂದರು.
ವೇ.ಬ್ರ.ಅಚ್ಚುತ ಅವಧಾನಿ, ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲ. ಭಾರತೀಯ ಪರಂಪರೆ ಭೋಗಕ್ಕಲ್ಲ. ಲೋಕೋಪಕಾರ ಮಾಡುವುದಕ್ಕೆ ಎಂಬುದನ್ನು ಬಾಯರಿ ತೋರಿಸಿಕೊಟ್ಟಿದ್ದಾರೆ.
ಅವರು ಮಾಡಿದ ಎಲ್ಲ ಕಾರ್ಯ ಯಜ್ಞದಂತಾಗಿದೆ. ಅವರದ್ದು ಋಷಿ ಸದೃಶ ಜೀವನ.
ಶುಭಾ ರಾಘವೇಂದ್ರ ಮಾತನಾಡಿ, ಬಾಯರಿಯವರದ್ದು ಶಿಸ್ತುಬದ್ಧ, ಗೊಂದಲವಿಲ್ಲದ, ಸಮಾಧಾನಚಿತ್ತದ ವ್ಯಕ್ತಿತ್ವವಾಗಿತ್ತು. ಅ.ಪ.ರಾಮಭಟ್ಟರ ಮರಣದಿಂದ ಅನಾಥವಾಗಿದ್ದ ಭಜನಾಪರಿಷತ್ತಿಗೆ ಜೀವ ತುಂಬಿದ್ದರು ಎಂದರು.
ವಿದ್ವಾನ್ ಜಿ.ಎಸ್.ನಟೇಶ್ , ಬಾಯರಿ ಅವರು ಜನಮಾನಸವನ್ನು ತಲುಪಿದ್ದರು. ಯಾವತ್ತೂ ದಕ್ಷಿಣೆ ಕೇಳಿದವರಲ್ಲ. ಕೋಪಗೊಂಡವರಲ್ಲ. ಹಿತವಾಗಿ ಮಾತನಾಡುವ, ಜೀವನ ತತ್ವವನ್ನು ಅರಿತವರು. ಈಗ ಬಾಯರಿ ಅವರ ಅಗಲುವಿಕೆಯಿಂದ ಶಿವಮೊಗ್ಗದ ಆಧ್ಯಾತ್ಮ ಸೌಧದ ಕಂಬಗಳು ಉದುರುತ್ತಿವೆ ಎಂದು ಹೇಳಿದರು.
ಅ.ನಾ.ವಿಜಯೇಂದ್ರ ಮಾತನಾಡಿ, ವಿನಾಯಕ ಬಾಯರಿ ವೃತ್ತಿಯಿಂದ ಪುರೋಹಿತರಾಗಿದ್ದರೂ ಪ್ರವೃತ್ತಿಯಿಂದ ಸಾಹಸಿಗರಾಗಿದ್ದರು.
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್ ಸವಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದರು ಎಂದರು.
ಡಾ.ಎಸ್.ಶ್ರೀಧರ್, ವೆಂಕಟೇಶ್ ರಾವ್, ಶ್ರೀರಂಜಿನಿ ದತ್ತಾತ್ರಿ, ಶಶಿಕಾಂತ್ ಕರಣಂ, ಸುಬ್ರಹ್ಮಣ್ಯ ಉಡುಪ, ಸಂದೇಶ ಉಪಾಧ್ಯ,ಸ.ನಾ.ಮೂರ್ತಿ ಮೊದಲಾದವರು ವಿನಾಯಕ ಬಾಯರಿ ಅವರ ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಬ್ರಾಹ್ಮಿನ್ ಅಸೋಸಿಯೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ವತಿಯಿಂದ ಅದರ ಅಧ್ಯಕ್ಷ ವೆಂಕಟೇಶ್ ರಾವ್ ಅವರು ಮೃತರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ನ್ನು ನೀಡಿದರು.
ಕೊನೆಯಲ್ಲಿ ಬಾಯರಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವಿ.ರಾಜು, ಉಮೇಶ ಆರಾಧ್ಯ, , ಸಚ್ಚಿದಾನಂದ ಉಡುಪ, ಎನ್.ಶ್ರೀಧರ ಉಡುಪ, ಶಬರೀಶ ಕಣ್ಣನ್, ವಿನಯ ಶಿವಮೊಗ್ಗ ಮೊದಲಾದವರಿದ್ದರು.