ಬೆಂಗಳೂರು : ರಾಜ್ಯದ ಒಂದು ಪತ್ರಿಕೆಯ ವರದಿಯ ಪ್ರಕಾರ ಮುಂದಿನ ಬೇಸಿಗೆಯಲ್ಲಿ ರಾಜ್ಯದ ಅಗ್ನಿಶಾಮಕ ಇಲಾಖೆಯು ಕೇವಲ ಶೇ35 ರಷ್ಟು ವಾಹನದೊಂದಿಗೆ ಕಾರ್ಯಚರಿಸಲಿದೆ ಎನ್ನುವ ವಿಷಯವನ್ನು ಪ್ರಕಟಿಸಿದೆ. ಮುಂಬರುವ ದಿನಗಳಲ್ಲಿ ಬೇಸಿಗೆಯ ಅತಿಯಾದ ಶಾಖದಿಂದಾಗಿ ಕಾಡ್ಗಿಚ್ಚು, ಬೆಂಕಿ ಅವಘಡಗಳು ಹೆಚ್ಚಾಗುವ ಸಂಭವನೀಯತೆಯಿದ್ದು ಗಂಭೀರ ಅಪಾಯಕಾರಿ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿನ ವಾಹನಗಳ ಕೊರತೆಯನ್ನು ತುರ್ತಾಗಿ ಪರಿಹರಿಸಬೇಕು ಎಂದು ಶುಕ್ರವಾರ ನಡೆದ ವಿಧಾನಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ಒತ್ತಾಯಿಸಿದರು.

ಅಗ್ನಿಶಾಮಕ & ತುರ್ತು ಸೇವೆಯನ್ನು ಸಮರ್ಪಕವಾಗಿ ನೀಡಬೇಕಾದ ಇಲಾಖೆಯಲ್ಲಿ 15 ವರ್ಷಗಳ ಹಳೆಯದಾದ 443ಕ್ಕೂ ಹೆಚ್ಚ ಅಗ್ನಿಶಾಮಕ ವಾಹನಗಳೂ ಪರಿಸರ ಮಾಲಿನ್ಯ ಮತ್ತು ರಸ್ತೆ ಸುರಕ್ಷತಾ ನೀತಿಗನುಣವಾಗಿ ಸ್ಕ್ರ್ಯಾಪ್ ಮಾಡಲಾಗುತ್ತಿರುವುದರಿಂದ ಕರ್ನಾಟಕ ರಾಜ್ಯ ಕೇವಲ ಶೇ35ರಷ್ಟು ಅಗ್ನಿಶಾಮಕ ವಾಹನಗಳೊಂದಿಗೆ ಈ ಬೇಸಿಗೆಯನ್ನು ಎದುರಿಸುವ ಸ್ಥಿತಿ ಎದುರಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 216 ಅಗ್ನಿಶಾಮಕ ಠಾಣೆಗಳಿದ್ದು. ಕನಿಷ್ಠ ಒಂದು ಠಾಣೆಗೆ ಒಂದು ಸುಸರ್ಜಿತ ಅಗ್ನಿ ಶಾಮಕ ವಾಹನದ ಅವಶ್ಯಕತೆ ಇದೆ ಎಂದರು.

ಕಳೆದ 3 ವರ್ಷಗಳಲ್ಲಿ ತುರ್ತು ಸೇವೆ ಮತ್ತು ಅಗ್ನಿ ಶಾಮಕ ಇಲಾಖೆಯು 4050 ಕೋಟಿ ಮೌಲ್ಯದ ಆಸ್ತಿ ರಕ್ಷಣೆಯೊಂದಿಗೆ 10,000 ಸಾವಿರಕ್ಕೂ ಹೆಚ್ಚು ಜನರ ಜೀವ ರಕ್ಷಣೆ ಮಾಡಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ. ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಇಲಾಖೆಯ ಬಹುತೇಕ ಪ್ರಮುಖ ಅಗ್ನಿಶಾಮಕ ಕಾರ್ಯದ ತಾಂತ್ರಿಕ ಉಪಕರಣಗಳನ್ನು ಹೊಂದಿರುವ ವಾಹನಗಳಾದ ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ವಾಹನಗಳು ಸೇರಿದಂತೆ ಇನ್ನಿತರ ವಾಹನಗಳನ್ನು ವಿಲೇವಾರಿ ಮಾಡುತ್ತಿರುವುದು ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಈಗಾಗಲೇ ಹವಾಮಾನ ತಜ್ಞರು ಅತೀ ಶಾಖದ ಕಠಿಣ ಬೇಸಿಗೆಯ ಮುನ್ಸೂಚನೆ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಕಾಡ್ಗಿಚ್ಚು, ಬೆಂಕಿ ಅವಘಡಗಳಂತಹ ಸಮಸ್ಯೆ ಎದುರಾಗಬಹುದು ಆದ್ದರಿಂದ ತುರ್ತು & ಅಗ್ನಿಶಾಮಕ ಸೇವೆಗಳ ಇಲಾಖೆಯಲ್ಲಿನ ವಾಹನಗಳ ಕೊರತೆಯನ್ನು ಸರ್ಕಾರ ತುರ್ತಾಗಿ ಪರಿಹರಿಸಬೇಕಾಗಿದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ಬೆಂಕಿ ಅವಘಡಗಳಿಂದ ಏನೇ ದುರಂತ ಸಂಭವಿಸಿದರೂ ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಹೇಳಿದರು.