ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಮಲೆನಾಡಿನ ಸರ್ಕಾರಿ ಶಾಲೆಯ ಸಾಧನೆಗೆ ರಾಷ್ಟ್ರಮಟ್ಟದ ಮನ್ನಣೆ ದೊರೆತಿದೆ. ಹೊಸನಗರ ತಾಲೂಕಿನ ಹುಂಚದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್. ಅವರು 2026ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ್ದು ಕರ್ನಾಟಕವೇ ಹೆಮ್ಮೆ ಪಡುವಂತಹ ಸಂಗತಿ.
ಶಿಕ್ಷಕರ ದಿನಾಚರಣೆ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ಉಪಸ್ಥಿತರಿದ್ದರು.
2026ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ದೇಶಾದ್ಯಂತ ಆಯ್ಕೆಯಾದ 48 ಶಿಕ್ಷಕರಲ್ಲಿ ರತ್ನಕುಮಾರಿ ಎಸ್. ಒಬ್ಬರಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕಿ ಎಂಬ ವಿಶೇಷ ಗೌರವಕ್ಕೂ ಪಾತ್ರರಾಗಿದ್ದಾರೆ.
ಸುಮಾರು 30 ವರ್ಷಗಳ ಬೋಧನಾ ಸೇವೆ ಸಲ್ಲಿಸಿರುವ ಅವರು ಕಳೆದ 24 ವರ್ಷಗಳಿಂದ ಸಮಟಗಾರು ಶಾಲೆಯಲ್ಲೇ ಮಕ್ಕಳ ಶಿಕ್ಷಣಕ್ಕಾಗಿ ಸಮರ್ಪಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಸರದೊಂದಿಗೆ ಪಾಠ, ಆಟದ ಮೂಲಕ ಕಲಿಕೆ, ಚಟುವಟಿಕೆ ಆಧಾರಿತ ಬೋಧನೆ ಹಾಗೂ ಇಂಗ್ಲಿಷ್ ಸಂವಹನ ಕೌಶಲ್ಯ ಬೆಳೆಸುವ ನವೀನ ಶಿಕ್ಷಣ ವಿಧಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ.
ಅವರ ಸೃಜನಾತ್ಮಕ ಬೋಧನಾ ಮಾದರಿ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕಾರ್ಯಕ್ಕೆ ದೊರೆತ ಈ ರಾಷ್ಟ್ರೀಯ ಗೌರವ ಮಲೆನಾಡು ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ.