ಶಿವಮೊಗ್ಗ ನ್ಯೂಸ್…

ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಸುನ್ನಿ ಜಮಾಯತ್ ವುಲ್ ಉಲೇಮಾ ಕಮಿಟಿ ವತಿಯಿಂದ ಇಂದು ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಯಿತು.ತ್ರಿಪುರಾದ ಅಗರ್ತಲಾ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ.

ಮನುಷ್ಯ ಕ್ರೂರನಾಗುತ್ತಿದ್ದಾನೆ ಧರ್ಮಗಳು ಮನುಷ್ಯರನ್ನು ಒಳ್ಳೆಯವರನ್ನಾಗಿ ಮಾಡಬೇಕು. ಆದರೆ, ಮಾನವ ಸಂಕುಚಿತ ಸರಪಳಿಗಳಿಂದ ಇವುಗಳನ್ನು ಕಟ್ಟಿಹಾಕಿರುವುದರಿಂದ ಇಂಥ ಸ್ವಾರ್ಥ ಕೃತ್ಯಗಳು ನಡೆಯುತ್ತವೆ. ಧರ್ಮಾಂಧರು ಸದ್ಭಾವನೆಗಳನ್ನೇ ಕ್ಷೀಣಿಸುತ್ತಿದ್ದಾರೆ. ದುರ್ಭಾವನೆಗಳು ಹೆಚ್ಚುತ್ತಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಕೆಲವು ಮನೋವಿಕಾರವಿರುವ ಮನುಷ್ಯರು ಮಾತ್ರ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಆಘಾತಕಾರಿಯಾಗಿದೆ. ಧರ್ಮದ ಹೆಸರಲ್ಲಿ ಕೆಲವು ಕಿಡಿಗೇಡಿಗಳು ಜಾತಿಯ ವಿಷದ ಬೀಜವನ್ನು ಬಿತ್ತಿ ಸಾಮರಸ್ಯ ಹಾಳುಮಾಡುತ್ತಿದ್ದಾರೆ ಎಂದು ದೂರಿದರು.

ಶಿಯಾ ಪಂಗಡಕ್ಕೆ ಸೇರಿದ ವಸೀಂ ರಿಜ್ವೆ ಎಂಬ ನೀಚ ವ್ಯಕ್ತಿ ಪ್ರವಾದಿ ಹಜರತ್ ಮೊಹ್ಮದ್ ಅವರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿ ಸುನ್ನಿ ಪಂಗಡದ ಮುಸ್ಲಿಂ ಸಮುದಾಯದವರನ್ನು ನಿಂದಿಸಿದ್ದಾನೆ. ಪ್ರವಾದಿಗಳ ಬಗ್ಗೆ ಏನೂ ಅರಿಯದೇ ಹೀಗೆ ಮಾತನಾಡುವುದು ತಪ್ಪು. ಇದಲ್ಲದೇ ಕುರಾನ್ ಬಗ್ಗೆ ಮಾತನಾಡುವುದು ಕೂಡ ಸರಿಯಲ್ಲ. ಅಪವಿತ್ರ ಪುಸ್ತಕವನ್ನು ಮುದ್ರಿಸಿ ಬಿಡುಗಡೆ ಮಾಡಿ ಕೋಮು ಭಾವನೆ ಕೆರಳಿಸಿರುವುದು ಹೀನಾಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ರಿಜ್ವೆಯಂತಹ ಕಿಡಿಗೇಡಿಯನ್ನು ಬಂಧಿಸಬೇಕು.

ಇಂತಹ ಕೃತ್ಯಗಳು ಮರುಕಳಿಸಬಾರದು. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಇಂತಹ ದುಷ್ಟರ ಬಲಿ ಹಾಕಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಇಕ್ಬಾಲ್ ಹಬೀಬ್ ಸೇಟ್, ಅಬ್ದುಲ್ ಸತ್ತಾರ್, ಏಜಾಜ್ ಪಾಷಾ, ಅಫ್ತಾಬ್ ಫರ್ವೀಜ್, ಮುನಾವರ್ ಪಾಷಾ, ಅನ್ಸರ್ ಅಹಮ್ಮದ್, ಮುಫ್ತಿ ಅಕಿಲ್ ರಾಜ್, ಖಾಜಿ ಅಶ್ರಫ್ ಸಾಬ್ ಸೇರಿದಂತೆ ಅಪಾರ ಜನ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…