ಶಿವಮೊಗ್ಗ ನ್ಯೂಸ್…

ನವೆಂಬರ್ 21ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಅಭ್ಯರ್ಥಿ ಡಿ. ಮಂಜುನಾಥ್ ಮನವಿ ಮಾಡಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಗೆ ಜಿಲ್ಲಾಧ್ಯಕ್ಷನಾಗಿ ಈಗಾಗಲೇ ಕೆಲಸ ಮಾಡಿದ ಅನುಭವ ಇದೆ. ನನ್ನ ಅವಧಿಯಲ್ಲಿ ತಮ್ಮೆಲ್ಲರ ಸಹಕಾರದಿಂದ ಕನ್ನಡದ ಕೆಲಸ ಮಾಡಿದ್ದೇನೆ. ಕ.ಸಾ.ಪವನ್ನು ಕಟ್ಟಿ ಬೆಳೆಸಿದ್ದೇನೆ. ನಾನು ಮಾಡಿರುವ ಹಲವಾರು ಉಪಯುಕ್ತ ಕನ್ನಡದ ಕೆಲಸಗಳ ಆಧಾರದ ಮೇಲೆ ಪುನರಾಯ್ಕೆ ಬಯಸಿದ್ದೇನೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡುಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಹಲವು ಸಮ್ಮೇಳನಗಳನ್ನು ನಡೆಸಿದ್ದೇನೆ. ಬಹಳ ಮುಖ್ಯವಾಗಿ ಸಾಹಿತ್ಯ ಗ್ರಾಮದ ಕನಸು ನನ್ನಿಂದಲೇ ಆರಂಭವಾಗಿದೆ. ಸರ್ಕಾರದಿಂದ ಸಿಕ್ಕಿರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಸಾಹಿತ್ಯ ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನ ನೀಡಿ, ಸಾಹಿತ್ಯದ ಮನಸ್ಸುಗಳನ್ನ ಒಟ್ಟುಗೂಡಿಸಿದ್ದೇನೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಭವನ ನಿರ್ಮಿಸಿದ್ದೇನೆ. ಹೋಬಳಿಗಳ ಮಟ್ಟದಲ್ಲಿ ಕಸಾಪ ಕಚೇರಿಗಳ ವಿಸ್ತರಿಸಿದ್ದೇನೆ. ಸಾಹಿತ್ಯದ ಕ್ರಿಯಾಶೀಲತೆಗೆ ಒತ್ತುಕೊಟ್ಟಿದ್ದೇನೆ. ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ಜಿಲ್ಲೆಯ ಸಾಧಕರ ಸ್ಮರಣೆ ಮಾಡಿದ್ದೇನೆ ಎಂದರು

ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರದಿಂದ ಸಾಹಿತ್ಯ ಭವನಕ್ಕೆ ಬಿಡುಗಡೆಯಾದ ಹಣವನ್ನ ಇವರ ಸ್ವಂತ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಸರ್ಕಾರದ ಹಣವನ್ನು ಹಾಗೆ ವೈಯಕ್ತಿಕ ಖಾತೆಯಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ ಎಂಬ ಸಣ್ಣ ಸತ್ಯದ ಅರಿವು ಕೂಡ ಇವರಿಗಿಲ್ಲ. ಆರೋಪ ಮಾಡುವುದಷ್ಟೇ ಇವರ ಕೆಲಸವಾಗಿದೆ. ಅದಕ್ಕೆ ಸಮರ್ಥನೆ ಕೇಳಿದರೆ ಇವರ ಬಳಿ ಉತ್ತರವಿಲ್ಲ. ಸರ್ಕಾರದ ಹಣ ಪೋಲಾಗಿದ್ದರೆ ಯಾವುದೇ ಕಾರಣಕ್ಕೂ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದಿಲ್ಲ. ಆ ಅರಿವು ಕೂಡ ಆರೋಪ ಮಾಡಿದವರಿಗೆ ಇಲ್ಲ ಎಂದರು.ಸಾಹಿತ್ಯದ ಕೆಲಸ ಎಂದರೆ ಅದು ಸಂಸ್ಕೃತಿಯ ಅರಿವಿನ ವಿಸ್ತಾರ ಎಂದೇ ಅರ್ಥ. ಭಾಷೆಯ ಸಮಸ್ಯೆ, ನೆಲ-ಜಲದ ಸಮಸ್ಯೆ ಇವೆಲ್ಲವನ್ನೂ ಚರ್ಚಿಸುತ್ತಾ ಕನ್ನಡದ ಮನಸ್ಸುಗಳನ್ನು ಸಂಘಟಿಸುತ್ತಾ ಕನ್ನಡತನದ ವಿಕಾಸವನ್ನು ಬೆಳೆಸಬೇಕು, ವಿಸ್ತರಿಸಬೇಕು ಎಂಬ ಹಂಬಲದಿಂದಲೇ ನಾನು ಈ ಕ್ಷೇತ್ರಕ್ಕೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಇನ್ನೂ ಮಾಡಬೇಕಾದ ಕೆಲಸ ಇದೆ. ಸಾಹಿತ್ಯ ಗ್ರಾಮವನ್ನು ಮೂಲ ನೀಲನಕ್ಷೆಯಂತೆ ಪೂರ್ಣಗೊಳಿಸುವುದು, ತಾಲ್ಲೂಕು ಕೇಂದ್ರಗಳಲ್ಲಿ ಅರ್ಧಕ್ಕೆ ನಿಂತ ಕಸಾಪ ಕಟ್ಟಡಗಳನ್ನು ಪೂರ್ಣಗೊಳಿಸುವುದು. ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು, ಗ್ರಂಥಾಲಯಗಳನ್ನು ಸ್ಥಾಪಿಸುವುದು, ಕಮ್ಮಟಗಳನ್ನು ನಡೆಸುವುದು, ಕಸಾಪವನ್ನು ಜಾತಿಯಿಂದ ಮುಕ್ತಗೊಳಿಸುವುದು, ಪುಸ್ತಕಗಳ ಪ್ರಕಟಣೆ…

ಹೀಗೆ ಹಲವಾರು ಕೆಲಸಗಳು ಬಾಕಿ ಉಳಿದಿದ್ದು, ತಾವು ಗೆದ್ದುಬಂದರೆ ಇವುಗಳನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ರತ್ನಯ್ಯ, ಮಧುಸೂದನ ಐತಾಳ, ಅಂಬಿಕ, ಲಕ್ಷ್ಮೀ ಮಹೇಶ್, ಕೃಷ್ಣಮೂರ್ತಿ, ಗಣೇಶ್, ಶಿವಪ್ಪ, ಭಾರತೀ ರಾಮಕೃಷ್ಣ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…