ಶಿವಮೊಗ್ಗ: ಅರಣ್ಯ ಇಲಾಖೆ ನೌಕರರು ತಮ್ಮ ಸಂಘಟನೆಯನ್ನು ಬಲಪಡಿಸಬೇಕು. ಸಂಘಟನಾತ್ಮಕ ಶಿಸ್ತು, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ ಇದ್ದಾಗ ಮಾತ್ರ ಸಂಘಟನೆಗೆ ಬಲ ಬರುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಅವರು ಇಂದು ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ 2020 -21 ಮತ್ತು ಸಂಘದ ನೂತನ ಲೋಗೋ ಅನಾವರಣ, 2022 ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಹಾಗೂ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅರಣ್ಯ ಇಲಾಖೆ ರಾಜ್ಯದಲ್ಲೇ ಅತ್ಯಂತ ಮೂರನೇ ದೊಡ್ಡ ಇಲಾಖೆಯಾಗಿದ್ದು, ಈ ದೇಶದ ಸಂಪತ್ತನ್ನು ತಮ್ಮ ಪ್ರಾಣದ ಹಂಗು ತೊರೆದು ಕಳ್ಳ ಕಾಕರಿಂದ ರಕ್ಷಿಸಿ, ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕೆಳಹಂತದ ಸಿಬ್ಬಂದಿಗಳು ಕಡಿಮೆ ಸಂಖ್ಯೆಯಲ್ಲಿದ್ದಾಗ ಆ ಇಲಾಖೆಯ ಮೇಲೆ ದುಷ್ಪರಿಣಾಮ ಆಗುವುದು ಸಾಮಾನ್ಯ ಸಂಗತಿ. ಅರಣ್ಯ ಒತ್ತುವರಿ ತೆರವು, ಅನಧಿಕೃತ ಕಡಿತಲೆ, ಅರಣ್ಯ ಭೂಮಿ ಸಾಗುವಳಿ, ಮುಂತಾದ ಅನೇಕ ಕ್ಲಿಷ್ಟ ಸಂದರ್ಭಗಳು ನಿರ್ವಹಿಸುವಲ್ಲಿ ಇಲಾಖೆಯ ಪಾತ್ರ ತುಂಬಾ ಮುಖ್ಯ ಎಂದರು.ಸಂಘಟನೆ ಬಲಗೊಳ್ಳಬೇಕಾದರೆ ಆ ಸಂಘಟನೆಯಲ್ಲಿ ಎಷ್ಟು ಹಣ ಇದೆ? ಗುರಿಗಳೇನು? ಏನೇನು ಹೋರಾಟ ಮಾಡಿದೆ? ಮುಂದಿನ ಯೋಜನೆಗಳೇನು? ಎನ್ನುವುದನ್ನು ಸದಸ್ಯರಿಗೆ ತಿಳಿಸಬೇಕು. ಮತ್ತು ಅವರ ಹಿತಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

ಯಾವುದೇ ಒಬ್ಬ ಸಿಬ್ಬಂದಿಗೆ ಕಿರಿಕಿರಿ ಉಂಟಾದಾಗ, ಅನ್ಯಾಯವಾದಾಗ ಎಲ್ಲರೂ ಒಟ್ಟಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಇದರಲ್ಲಿ ವೃಂದ ಸಂಘಗಳ ಜವಾಬ್ದಾರಿ ಇದ್ದು, ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬು ಕೆಲಸ ಮಾಡಬೇಕು ಎಂದರು.ಪ್ರತಿ ಜಿಲ್ಲೆಯಲ್ಲಿ ಎಲ್ಲಾ ಅರಣ್ಯ ನೌಕರರು ಒಟ್ಟಾಗಿ ಒಂದು ಮದರ್ ಕೇಡರ್ ಅಸೋಸಿಯೇಷನ್ ಮಾಡಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಅವರ ಮುಂಬಡ್ತಿ, ವೇತನ ತಾರತಮ್ಯ ಮುಂತಾದ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಬೇಕು. ಗಾರ್ಡ್ ಎನ್ನುವ ಪದ ತೆಗೆದು ಗಸ್ತು ಅರಣ್ಯಾಧಿಕಾರಿ ಎಂಬ ಮುಂಬಡ್ತಿ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಲವು ಇಲಾಖೆಗಳಲ್ಲಿ ಈಗಾಗಲೇ ಪದೋನ್ನತಿ ನೀಡಲಾಗಿದೆ.

ಕೊರೋನಾದಿಂದಾಗಿ ಆರ್ಥಿಕ ಇಲಾಖೆ ಕೆಲವೊಂದು ವೇತನ ತಾರತಮ್ಯ ಸಮಸ್ಯೆಗೆ ತಡೆ ಹಿಡಿದಿದ್ದು, ಮುಂದಿನ ದಿನಗಳಲ್ಲಿ ಅದು ಕೂಡ ಪರಿಹಾರವಾಗಲಿದ್ದು, ಈಗಾಗಲೇ ಇಲಾಖೆಯ ಪ್ರಮುಖರು ಮತ್ತು ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷ ವಿಠಲ್ ಜೋನಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಯು. ಶಂಕರ್, ಆರ್. ಮೋಹನ್ ಕುಮಾರ್, ಅಧಿಕಾರಿಗಳಾದ ಎನ್. ರಾಮಪ್ಪ, ರಾಜು ಲಿಂಬು ಚವ್ಹಾಣ್, ವಿ. ಆನಂದ್, ಪಿ.ಆರ್. ಜಗನ್ನಾಥ್, ಎಲ್. ನಂದೀಶ್, ಫಾರೂಕ್ ಪಾಶ, ಹೆಚ್.ಆರ್. ಸುರೇಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…