ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎನ್.ಎಸ್.ಯು.ಐ.(ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ತೀವ್ರವಾಗಿ ವಿರೋಧಿಸಿದೆ.ಇಂದು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ. ಅಲ್ಲದೇ ವಿದ್ಯಾರ್ಥಿಗಳಿಗೆ ಮಾರಕವಾಗುತ್ತದೆ.

ಈ ನೀತಿಯಿಂದ ವಿದ್ಯಾಭ್ಯಾಸವೇ ಕುಂಠಿತಗೊಳ್ಳುತ್ತದೆ ಎಂದರು.ಯಾವ ಚರ್ಚೆ ಇಲ್ಲದೆ ವಿದ್ಯಾರ್ಥಿ ಸಂಘಟನೆಗಳ ಜೊತೆ ಮಾತನಾಡದೇ ಶಿಕ್ಷಣ ತಜ್ಞರ ಜೊತೆ ಆಲೋಚಿಸದೇ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಸಾಧಕ ಬಾಧಕಗಳೇ ಯಾರಿಗೂ ಗೊತ್ತಿಲ್ಲ. ವಿದ್ಯಾರ್ಥಿಗಳಿಗಿರಲಿ, ಶಿಕ್ಷಕರಿಗೂ ಈ ಬಗ್ಗೆ ಗೊಂದಲವಿದೆ. ಈಗಿರುವ ಪದವಿಯನ್ನು 45 ವರ್ಷಕ್ಕೆ ಏರಿಸಲಾಗಿದೆ. ಎರಡು ವರ್ಷ, ಮೂರು ವರ್ಷ ಹಾಗೂ ನಾಲ್ಕು ವರ್ಷಕ್ಕೆ ಪದವಿ ನೀಡಲಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಎರಡು ವರ್ಷದ ಪದವಿ ಪ್ರಮಾಣ ಪತ್ರ ಪಡೆದು ಮುಂದೆ ಓದುವುದನ್ನೇ ನಿಲ್ಲಿಸುತ್ತಾರೆ. ಹಾಗಾಗಿ ಶಿಕ್ಷಣದಿಂದ ವಂಚಿತರಾಗುವ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

ಬಹಳ ಮುಖ್ಯವಾಗಿ ಈ ನೀತಿಯ ಹಿಂದೆ ಖಾಸಗೀಕರಣದ ಹುನ್ನಾರವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಲಗ್ಗೆ ಹಾಕಿ ಶಿಕ್ಷಣ ವ್ಯವಸ್ಥೆಯನ್ನೇ ಗೊಂದಲಕ್ಕೀಡು ಮಾಡುತ್ತಾರೆ. ಕೇಸರೀಕರಣದ ಅಪಾಯ ಕೂಡ ಇಲ್ಲಿದೆ. ಶಿಕ್ಷಣದ ಸ್ವರೂಪವೇ ಬದಲಾಗುತ್ತದೆ. ಉದ್ಯಮಿಗಳು ಕೂಡ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಮಕ್ಕಳ ಶಿಕ್ಷಣ ಮಟ್ಟ ಕುಸಿಯುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಏಕಾಏಕಿ ಈ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿದರು.ಕಾಲೇಜ್ ಗಳಲ್ಲಿ ಯಾವುದೇ ಮೂಲ ಸೌಲಭ್ಯಗಳು ಈಗಿಲ್ಲ. ಸರ್ಕಾರ ಮೊದಲು ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ನೀಡಲಿ. ವಿದ್ಯಾರ್ಥಿ ವೇತನ ಸೇರಿದಂತೆ ಯಾವುದೇ ನೆರವು ಸರ್ಕಾರದಿಂದ ಸಿಗುತ್ತಿಲ್ಲ. ಹೀಗಿದ್ದೂ ಕಾರ್ಪೋರೇಟ್ ಗಳಿಗೆ ಮಣೆ ಹಾಕುವ, ಬಡವರ ವಿರೋಧಿಯಾಗಿರುವ ಈ ನೀತಿಯನ್ನು ಜಾರಿಗೆ ತರಲು ಹೊರಟಿರುವುದು ಸರ್ಕಾರದ ಹಸ್ತಕ್ಷೇಪವೇ ಆಗಿದೆ.

ಪಠ್ಯ ಪುಸ್ತಕಗಳಲ್ಲಿಯೂ ಕೂಡ ಅನ್ಯ ವಿಷಯಗಳು ಸೇರಿಕೊಳ್ಳುವ ಅಪಾಯ ಕೂಡ ಇದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗಲಿವೆ. ಆದ್ದರಿಂದ ಇದನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಜಿ. ಮಧುಸೂದನ್, ಕೆ. ಚೇತನ್, ಬಾಲಾಜಿ, ರವಿ., ವಿಜಯ್, ಗಿರೀಶ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…