ಮಂಜುನಾಥ ಶೆಟ್ಟಿ…
ಒಳ್ಳೆಯ ಛಾಯಾಚಿತ್ರ ಸಾವಿರ ಪದಗಳಿಗೆ ಸಮಾನವಾಗಿರುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಶಿವಮೊಗ್ಗ ತಾಲೂಕು ವಿಡಿಯೋ ಮತ್ತು ಫ್ರೋಟೊಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ಮತ್ತು ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಒಬ್ಬ ಫೋಟೋಗ್ರಾಫರ್ ಕಲಾವಿದನು ಆಗಿರುತ್ತಾನೆ. ಅವನು ಸಮಾಜದ ಕನ್ನಡಿಯಾಗಿದ್ದಾನೆ, ದುಡಿಮೆ ಒಂದು ವೃತ್ತಿಯಾಗದೆ, ಪ್ರವೃತ್ತಿ ಬಹಳ ಮುಖ್ಯವಾಗುತ್ತದೆ. ಪ್ರವೃತ್ತಿಗೆ ಪ್ರೋತ್ಸಾಹ ಕೊಡುವುದರಿಂದ ಅವರು ಮಾಡುವ ವೃತ್ತಿಯು ಕೂಡ ಸ್ವಾಭಾವಿಕವಾಗಿ ಉನ್ನತ ಸ್ಥಾನಕ್ಕೆ ಏರುತ್ತೆ ಎಂದರು.
ಅನೇಕ ವೈವಿಧ್ಯಗಳು ಛಾಯಾಚಿತ್ರದ ಮೂಲಕ ಕಾಣಬಹುದು. ಒಂದು ದೊಡ್ಡ ವಿಷಯವನ್ನು ಒಂದು ಛಾಯಾಚಿತ್ರ ಮೂಲಕ ಹೇಳಬಹುದು. ಛಾಯಾಗ್ರಾಹಕ ಸಂಘ ಕೇವಲ ವೃತ್ತಿಗೆ ಮಾತ್ರ ಸಿಮೀತಗೊಳ್ಳದೆ ರಕ್ತದಾನ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಕೂಟವನ್ನು ಹಮ್ಮಿಕೊಳ್ಳುವ ಮೂಲಕ ಅರ್ಥ ಪೂರ್ಣವಾಗಿ ದಿನಾಚರಣೆ ಮಾಡಿದೆ.
ರಕ್ತದಾನದಿಂದ ಅಗತ್ಯವುಳ್ಳವರು ರಕ್ತ ಪಡೆದಾಗ ಅವರ ಆರ್ಶೀವಾದ ನಿಮಗೆ ಲಭಿಸುತ್ತದೆ. ಪ್ರತಿಭಾ ಪುರಸ್ಕಾರದಿಂದ ಮಕ್ಕಳಲ್ಲಿ ಇನ್ನೂ ಹೆಚ್ಚಿನ ಅಂಕ ಪಡೆಯಲು ಪ್ರೋತ್ಸಾಹ ನೀಡುತ್ತದೆ. ಸಂಘ ಒಂದು ಕುಟುಂಬ ಸದಸ್ಯರಂತೆ ಕೆಲಸ ಮಾಡಿಕೊಂಡು ಬರುತ್ತಿದೆ. ಸೊಸೈಟಿ ನಿರ್ಮಿಸಿ ಸ್ವಂತ ಕಟ್ಟಡವನ್ನು ಮಾಡಿ ಅಗತ್ಯವುಳ್ಳವರಿಗೆ ಸಾಲವನ್ನು ನೀಡಿ ಒಳ್ಳೆಯ ಕಾರ್ಯ ಮಾಡಿದೆ. ತುರ್ತು ಸಂದರ್ಭದಲ್ಲಿ ಸಾಲವನ್ನು ಸರಿಯಾಗಿ ವಾಪಸ್ ನೀಡದರೆ ಇನ್ನೊಬ್ಬರಿಗೆ ಅನುಕೂಲವಾಗುತ್ತದೆ ಎಂದರು.
ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ಪ್ರದೀಪ್ ಅವರಿಂದ ಹಳೆಯ ಕ್ಯಾಮರ ಪ್ರದರ್ಶನ ಮತ್ತು ಪತ್ರಿಕೆ ಹಾಗೂ ವನ್ಯ ಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ವನ್ಯ ಜೀವಿ ಮತ್ತು ಜನ ಜೀವನ ಕುರಿತು ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಸೋಸಿಯೆಶನ್ ಅಧಕ್ಷ ಡಿ.ಎಸ್.ಅಮರೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೋಮಶೇಖರ್.ಕೆ.ಇ, ಮೋಹನ್ ಕುಮಾರ್.ಹೆಚ್.ವಿ, ಸತೀಶ್.ವಿ, ವಿಜಯ್ ಕುಮಾರ್.ಸಿ.ಕೆ, ಪ್ರಸನ್ನ ರೇಣುಕಾ, ಮಹೇಶ್, ಚಂದ್ರ ಪ್ರಕಾಶ್ ಹಲವರು ಇದ್ದರು.